ವಿಟ್ಲ ಪ್ರೆಸ್ ಕ್ಲಬ್ನಲ್ಲಿ ಮೊದಲ ಸುದ್ದಿಗೋಷ್ಠಿಯಲ್ಲಿ ಸಚಿವ ರಮಾನಾಥ ರೈ
ಮುಂಬಯಿ (ವಿಟ್ಲ), ನ.04: ನಗರೋತ್ಥಾನ ಯೋಜನೆಯಡಿ ಹೊಸದಾಗಿ ನಿರ್ಮಾಣವಾದ ಪಟ್ಟಣ ಪಂಚಾಯಿತಿ ಹಾಗೂ ಹಳೆ ನಗರ ಪಂಚಾಯಿತಿಗಳಿಗೆ ಹಣ ವಿಂಗಡನೆಯಾಗಿ ಮಂಜೂರಾತಿಯಾಗಿದೆ. ಹೊಸದಾಗಿ ಘೋಷಣೆಯಾದ ನಗರ ಪಂಚಾಯಿತಿಗಳಿಗೆ ತಲಾ 5 ಕೋಟಿ ಬಿಡುಗಡೆಯಾಗಿದ್ದು, ವಿಟ್ಲಕ್ಕೂ ಇದರ ಪ್ರಯೋಜನ ಸಿಗಲಿದೆ. ದುಡ್ಡಿನ ಕೊರತೆಗಿಂತ ಹೆಚ್ಚಾಗಿ ಜನರ ಸಹಕಾರ ಇದ್ದಾಗ ಯೋಜನೆಗಳು ಯಶಸ್ವಿಯಾಗುತ್ತದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.
ಬೆಳೆಯುವ ನಗರಗಳಲ್ಲಿ ವಾಹನ ಸಂಚಾರ ಸುಗಮವಾಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ರಸ್ತೆ ನಿರ್ಮಾಣ ಕಾರ್ಯಗಳು ನಡೆದಿದೆ. ಪೆÇಳಲಿ ಜಂಕ್ಷನ್ ನಿಂದ ಕಬಕ ಜಂಕ್ಷನ್ ವರೆಗೆ 18 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳೆಲ್ಲವನ್ನೂ ಪ್ರಗತಿ ಪಡಿಸುವ ಕಾರ್ಯ ಸುಸೂತ್ರವಾಗಿ ನಡೆಯುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅಳಿಕೆ ಗ್ರಾಮಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಅವರು ಮೊದಲ ಸುದ್ದಿಗೋಷ್ಠಿ ನಡೆಸಿ ಹೇಳಿದರು.
ವಿಟ್ಲ ಪೇಟೆಯ ಅಭಿವೃದ್ಧಿಗೆ ಸಮಸ್ಯೆಯಾದ ಮೆಸ್ಕಾಂ ಕಂಬಗಳ ತೆರುವು ಕಾರ್ಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿಚಾರಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಮಾಧ್ಯಮದವರ ಬೇಡಿಕೆಯಂತೆ ಕಲ್ಲಡ್ಕ - ಸಾರಡ್ಕ ಅಂತರಾಜ್ಯ ಹೆದ್ದಾರಿಯ ದುರಸ್ಥಿಕಾರ್ಯವನ್ನು ಮಾಡಲಾಗಿದೆ. ಮುಂದಿನ ದಿನದಲ್ಲಿ ಅಗಲೀಕರಣ ಗೊಳಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಬಂಟ್ವಾಳ ಪುರಸಭೆಯಲ್ಲಿ ರಸ್ತೆ ಅಗಲೀಕರಣ ಮಾಡುವ ಬಗ್ಗೆ ನಿರ್ಣಯಕೈಗೊಂದಿರುವುದರಿಂದ ಅಂತ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ಭೂಮಿಯಲ್ಲಿ ಅಂತರ್ಜಲದ ಮಟ್ಟ ಕುಸಿತವಾಗಬಹುದೆಂಬ ನಿಟ್ಟಿನಲ್ಲಿ ಕೊಳವೆಬಾವಿ ಕೊರೆಯುವುದನ್ನು ಕಂದಾಯ ಇಲಾಖೆ ನಿಷೇಧಕ್ಕೆ ಮುಂದಾಗಿದೆ. ಖಾಸಗಿಯವರಿಗೆ ಮಾತ್ರ ಇದು ತೊಂದರೆಯಾಗಲಿದ್ದು, ಸರ್ಕಾರದ ಯೋಜನೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಂತರ್ಜಲದ ವಿಚಾರದಲ್ಲಿ ಕಿಂಡಿ ಅಣಕಟ್ಟು ಸೇರಿ ಸಮಗ್ರ ಯೋಜನೆಯನ್ನು ಸಿದ್ದ ಪಡಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿದೆ. ಈ ಭಾಗದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪತ್ರಕರ್ತರು ಶ್ರಮಿಸಲಿ ಎಂದು ಹೇಳಿದರು.
ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಪಟ್ಟಣ ಪಂಚಾಯಿತಿಗೆ ಅನುದಾನಗಳು ಬಿಡುಗಡೆಯಾಗುತ್ತಿದ್ದು, ನಗರೋಸ್ಥಾನದ ಅನುದಾನ ಹಂಚಿಕೆ ಜವಾಬ್ದಾರಿ ಶಾಸಕರಿಗಿದೆ. ಇದರಲ್ಲಿ ಕಟ್ಟಣ, ರಸ್ತೆ, ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಅವಕಾಶಗಳಿದೆ. ಹೊಸ ಕಟ್ಟಣ ನಿರ್ಮಾಣವಾಗುವುದಿದ್ದರೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಒಂದು ಶಾಶ್ವತ ವ್ಯವಸ್ಥೆಗೆ ಪ್ರಯತ್ನಿಸಲಾಗುವುದು. ಅತ್ಯಧಿಕ ಅಭಿವೃದ್ಧಿ ಕಾರ್ಯಗಳು ಈ ಆಡಳಿತಾವಧಿಯಲ್ಲಿ ನಡೆದಿದೆ ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣಚಂದ್ರ ಆಳ್ವ, ಕರ್ನಾಟಕ ರಾಜ್ಯ ಇಂಟಕ್ ಬಂಟ್ವಾಳ ತಾಲೂಕು ಆಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು.
ಚಿತ್ರ: ಅರಣ್ಯ ಸಚಿವ ಬಿ ರಮಾನಾಥ ರೈ ವಿಟ್ಲ ಪ್ರೆಸ್ ಕ್ಲಬ್ನಲ್ಲಿ ಮೊದಲ ಸುದ್ದಿಗೋಷ್ಠಿ ನಡೆಸುವ ಮೂಲಕ ಸುದ್ದಿಗೋಷ್ಠಿಗೆ ಚಾಲನೆ ನೀಡಿದರು.