ಮಂಗಳೂರು: ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ನೆಯ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ವಿಟ್ಲ ಸಮೀಪದ ಮಾಣಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಚಾಲಕರು ಹಾಗೂ ಸಾರ್ವಜನಿಕರು ಪರದಾಡಿದ ಘಟನೆ ಸೋಮವಾರ ನಡೆದಿದೆ. ಸೋಮವಾರ ಮಧ್ಯಾಹ್ನ ವೇಳೆಗೆ ಪೆರ್ನೆಯಲ್ಲಿ ಗ್ಯಾಸ್ ಟ್ಯಾಂಕರ್ ಬಿದ್ದಿದ್ದು, ಅದನ್ನು ಮೇಲೆತ್ತುವ ವೇಳೆ ವಾಹನ ಸಂಚಾರದ ರಸ್ತೆಗಳನ್ನು ಬದಲಾಯಿಸಲಾಗಿತ್ತು.
ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುವ ವಾಹನಗಳಿಗೆ ಮಾಣಿ ಜಂಕ್ಷನ್ನಲ್ಲಿ ಪುತ್ತೂರು ಮೂಲಕ ತೆರಳುವಂತೆ ಸೂಚಿಸಲಾಗಿತ್ತು. ಪೆರ್ನೆಕಡೆ ಹೋಗುವ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಬೃಹತ್ ವಾಹನಗಳು ಮಾಣಿ ಜಂಕ್ಷನ್ ನಲ್ಲಿ ಪುತ್ತೂರು ರಸ್ತೆ ತಿರುಗುತ್ತಿದ್ದಂತೆ ಹಾಗೂ ವಾಹನ ಚಾಲಕರಿಗೆ ಯಾವುದೇ ಮುನ್ಸೂಚನೆ ಸಿಗದ ಹಿನ್ನೆಲೆಯಲ್ಲಿ ಚಾಲಕರಲ್ಲಿ ಗೊಂದಲ ಉಂಟಾಗಿದೆ. ಬೃಹತ್ ಗಾತ್ರದ ವಾಹನಗಳು ರಸ್ತೆಯಲ್ಲಿ ನಿಂತಿದ್ದರಿಂದ ಸುಮಾರು ಅರ್ಧ ಗಂಟೆಗಿಂತಲೂ ಅಧಿಕ ಸಮಯ ಸುಮಾರು ಕಿ.ಮೀ. ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿತ್ತು.
ಈ ಸಂದರ್ಭ ಜೋರಾಗಿ ಮಳೆ ಸುರಿದಿದ್ದರಿಂದ ವಾಹನ ಚಾಲಕರು ಮತ್ತಷ್ಟು ತೊಂದರೆಗೋಳಗಾದವರು. ಇಬ್ಬರು ಟ್ರಾಫಿಕ್ ಪೊಲೀಸರನ್ನು ಇಲ್ಲಿ ನಿಯೋಜಿಸಿದರಿಂದ ಮಳೆಯ ನಡುವೆ ವಾಹನ ದಟ್ಟನೆಯನ್ನು ನಿವಾರಿಸಲು ಅವರು ಹರಸಾಹಸಪಟ್ಟರು.