ಮಂಗಳೂರು: ಕರಾವಳಿಯ ಚೆಲುವೆ ಶ್ರೀನಿಧಿ ರಮೇಶ್ ಶೆಟ್ಟಿ ಅವರು 2016ನೇ ಸಾಲಿನ "ಮಿಸ್ ಸುಪ್ರ ನ್ಯಾಶನಲ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪೋಲೆಂಡ್ನಲ್ಲಿ ಡಿ. 2ರ ರಾತ್ರಿ ನಡೆದ ಅಂತಿಮ ಸುತ್ತಿನಲ್ಲಿ ವಿಶ್ವಾದ್ಯಂತದ 71 ಸ್ಪರ್ಧಿಗಳನ್ನು ಹಿಂದಿಕ್ಕಿ ಮಂಗಳೂರು ತಾಲೂಕಿನ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗುತ್ತಿನ ಶ್ರೀನಿಧಿ ಸೌಂದರ್ಯ ರಾಣಿಯಾಗಿ ಹೊರಹೊಮ್ಮಿದರು.ಶ್ರೀನಿಧಿ ಅವರಿಗೆ ಕಳೆದ ಬಾರಿಯ ಸುಪ್ರಾ ನ್ಯಾಶನಲ್ ವಿಜೇತೆ ಪೆರುಗ್ವೆಯ ಸ್ಟೆಫಿನಾ ಸ್ಟಗ್ನಂ ಅವರು ಕಿರೀಟವನ್ನು ಧರಿಸಿದರು.
ವೆನೆಜುವೆಲಾದ ವಲೇರಿಯಾ ಪ್ರಥಮ ರನ್ನರ್ ಅಪ್, ದಕ್ಷಿಣ ಅಮೆರಿಕದ ಪುಟ್ಟ ದೇಶ ಸುರಿನಾಮ್ನ ಜಲೀಸಾ ಪಿ. ಎರಡನೇ ರನ್ನರ್ ಅಪ್, ಶ್ರೀಲಂಕಾದ ಒರೆನಾ ಮರಿಯಂ ಜಯಸಿರಿ ಮೂರನೇ ರನ್ನರ್ ಅಪ್ ಹಾಗೂ ಹಂಗೇರಿಯ ಕೊರಿನಾ ಕೆ. ಅವರು ನಾಲ್ಕನೇ ರನ್ನರ್ ಅಪ್ ಆಗಿ ಮೂಡಿಬಂದರು. ಈ ಹಿಂದೆ 2014ರಲ್ಲಿ ಮಂಗಳೂರಿನ ಆಶಾ ಭಟ್ ಈ ಪ್ರಶಸ್ತಿಯನ್ನು ಪಡೆದಿದ್ದರು.ಮುಂಬಯಿಯಲ್ಲಿ ಮೂಲ್ಕಿ ಕಾರ್ನಾಡಿನ ರಮೇಶ್ ಶೆಟ್ಟಿ ಮತ್ತು ಕಿನ್ನಿಗೋಳಿ ತಾಳಿಪಾಡಿಗುತ್ತು ಕುಶ ಆರ್. ಶೆಟ್ಟಿ ಅವರ ಪುತ್ರಿಯಾಗಿ ಜನಿಸಿದ್ದ 24ರ ಹರೆಯದ ಶ್ರೀನಿಧಿ ಅವರು ಮೂಲ್ಕಿ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಬಳಿಕ ಮಂಗಳೂರಿನ ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ನಡೆಸಿದ್ದರು. ಅನಂತರ ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು.
ನೃತ್ಯ, ಚಾರಣ ಮತ್ತು ಈಜು ಹವ್ಯಾಸ ಹೊಂದಿರುವ ಶ್ರೀನಿಧಿ ಅವರು ಈ ಹಿಂದೆಯೂ ಹಲವಾರು ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಕಾಲೇಜು ದಿನಗಳಿಂದಲೇ ಫ್ಯಾಶನ್ ಶೋ ಕಾರ್ಯಕ್ರಮಗಳತ್ತ ಆಕರ್ಷಿತರಾಗಿದ್ದರು. ಇಂಜಿನಿಯರಿಂಗ್ ಪದವಿ ಬಳಿಕ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಶ್ರೀನಿಧಿ ಅವರು ಸುಪ್ರಾ ಸ್ಪರ್ಧೆಯ ಭಾರತೀಯ ಎಡಿಶನ್ನಲ್ಲಿ ವಿಜೇತೆಯಾದ ಬಳಿಕ 3 ತಿಂಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಜಾಗತಿಕ ಸ್ಪರ್ಧೆಯತ್ತ ಗಮನ ನೀಡಿದ್ದರು. ವಿಶ್ವ ಸೌಂದರ್ಯ ಕಿರೀಟ ಜಯಿಸುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಕಠಿಣ ಯತ್ನ ನಡೆಸುತ್ತಿರುವು ದಾಗಿ ಇತ್ತೀಚೆಗಷ್ಟೇ ಶ್ರೀನಿಧಿ ತಿಳಿಸಿದ್ದರು. ಪ್ರಸ್ತುತ ಶ್ರೀನಿಧಿ ಅವರು ಪೋಲೆಂಡ್ನಲ್ಲಿದ್ದು, ಡಿಸೆಂಬರ್ ಕೊನೆಯ ವೇಳೆಗೆ ಮುಂಬಯಿಗೆ ಆಗಮಿಸಲಿದ್ದಾರೆ. ಜನವರಿಯಲ್ಲಿ ಊರಿಗೆ ಆಗಮಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ಶ್ರೀನಿಧಿ ಕುಟುಂಬಿಕರು ತಿಳಿಸಿದ್ದಾರೆ.