ಮಂಗಳೂರು, ಡಿ.12: ಮನುಷ್ಯ ಎಷ್ಟು ವರ್ಷ ಬದುಕುತ್ತಾನೋ ಎನ್ನುವುದು ಯಾರಿಗೂ ಗೊತ್ತಿಲ್ಲ, ಆದರೆ ಬದುಕಿದ ಅವಧಿಯಲ್ಲಿ ತಾಳ್ಮೆಗೆ ಆಧ್ಯತೆ ನೀಡಿ ಎಲ್ಲರೊಂದಿಗೂ ಪ್ರೀತಿ, ವಿಶ್ವಾಸದಿಂದ ಜೀವಿಸಿ ಎಂದು ಆಹಾರ ಸಚಿವ ಯು.ಟಿ.ಖಾದರ್ ಕರೆ ನೀಡಿದರು.
ವಿಶ್ವ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ಅವರ ಜನ್ಮದಿನ ಈದ್-ಮಿಲಾದ್ ಪ್ರಯುಕ್ತ ಸೋಮವಾರ ಉಳ್ಳಾಲ ಸಯ್ಯದ್ ಮದನಿ ದರ್ಗಾ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಸಮಸ್ಯೆ ಬಂದಾಗ ಹಿರಿಯರು, ಗುರುಗಳ ಮಾರ್ಗದರ್ಶನ ಸಲಹೆ ಪಡೆದು ಪರಿಹರಿಸಲು ಮುಂದಾದಲ್ಲಿ ಸಮಾಜದಲ್ಲಿ ಶಾಂತಿ, ಸೌಹಾರ್ದ ಜೀವನ ನಡೆಸಲು ಸಾಧ್ಯ, ನಾವು ಮಾಡುವ ಕೆಲಸ ಎಷ್ಟೇ ಉತ್ತಮವಾಗಿದ್ದರೂ ತೆಗಳುವವರು ಇದ್ದೇ ಇರುತ್ತಾರೆ, ಆದರೆ ಅವುಗಳಿಗೆ ಕಿವಿಗೊಡದೆ ಮುನ್ನಡೆಯುವುದು ಮುಖ್ಯ ಎಂದರು.
ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಉಳ್ಳಾಲ್ ಮಾತನಾಡಿ, ಇಸ್ಲಾಂ ಎಂದರೆ ಶಾಂತಿ ಎಂದರ್ಥ, ಅಲ್ಲಾಹನ ಪ್ರವಾದಿ ತೋರಿದ ದಾರಿಯಲ್ಲಿ ನಾವು ಮುನ್ನಡೆದರೆ ಜೀವನದಲ್ಲಿ ಜಯಗಳಿಸುವ ಜೊತೆಗೆ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ. ಮೂರು ನಿಮಿಷದ ಕ್ಷುಲ್ಲಕ ವಿಚಾರದಲ್ಲಿ ನಡೆಯುವ ಗಲಭೆಯಿಂದ ಉಂಟಾಗುವ ವೈಮನಸ್ಸು ಜೀವನಪರ್ಯಂತ ಇರುವುದರಿಂದ ಇಂತಹ ಕೃತ್ಯಗಳಿಗೆ ಅವಕಾಶ ನೀಡಬೇಡಿ, ಅದೆಷ್ಟೋ ಬಡವರು ಆಸ್ಪತ್ರೆಯ ವೆಚ್ಚ ಭರಿಸಲಾಗದೆ ಸಂಕಷ್ಟದಲ್ಲಿದ್ದು ಅಂತಹವರ ನೆರವಿಗೆ ದಾನಿಗಳ ಸಹಕಾರದಲ್ಲಿ ದರ್ಗಾ ವತಿಯಿಂದ ವೈದ್ಯಕೀಯ ನಿಧಿ ಸ್ಥಾಪಿಸುವ ಚಿಂತನೆ ಇದೆ ಎಂದರು.
ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಬಾವಾ ಮಹಮ್ಮದ್ , ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಜತೆಕಾರ್ಯದರ್ಶಿಗಳಾದ ನೌಷಾದ್, ಆಝಾದ್ ಇಸ್ಮಾಯಿಲ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕಪರಿಶೋಧಕ ಯು.ಟಿ.ಇಲ್ಯಾಸ್ ಮತ್ತು ಸಮಿತಿ ಸದಸ್ಯರು, ನಗರಸಭಾಧ್ಯಕ್ಷರು, ಕೌನ್ಸಿಲರ್ಗಳು, ಮೊದಲಾದವರು ಉಪಸ್ಥಿತರಿದ್ದರು.