ಯಕ್ಷಗಾನವು ಧರ್ಮ ಜಾಗೃತಿಯನ್ನು ಮೂಡಿಸುವುದರಿಂದ ಲೋಕೋಪಯೋಗಿ – ಆಸ್ರಣ್ಣ
ಮುಂಬಯಿ, ಡಿ.12 : ಕಾವ್ಯ ಪ್ರಕಾರವೊಂದು ನಿರ್ವಹಿಸಬೇಕಾದ ಎಲ್ಲಾ ಹೊಣೆಗಾರಿಕೆಯನ್ನು ನಿಭಾಯಿಸುವ ಸರ್ವಾಂಗಸುಂದರವಾದ ಕಲೆಯಾದ ಯಕ್ಷಗಾನವು ಧರ್ಮ ಜಾಗೃತಿಯನ್ನು ಮೂಡಿಸುವುದರಿಂದ ಲೋಕೋಪಯೋಗಿ ಎಂದು ಶ್ರೀ ಕ್ಷೇತ್ರ ಕಟೀಲು ದೇವಳದ ಅರ್ಚಕ, ಯಕ್ಷಗಾನ ಚಿಂತಕ, ವಿದ್ವಾನ್ ವೇ.ಮೂ. ಹರಿನಾರಾಯಣದಾಸ ಆಸ್ರಣ್ಣ ಅವರು ಹೇಳಿದರು.
ಅವರು ಭಾನುವಾರ ಸಂಜೆ ಮುಂಬಯಿ ಸಯನ್ ಗೋಕುಲ್ ರಸ್ತೆಯ ಗೀತಾ ಗೋವಿಂದ ಹಾಲ್ನಲ್ಲಿ ಮುಂಬೈ ಪದವೀಧರ ಯಕ್ಷಗಾನ ಸಮಿತಿ ಪ್ರಾಯೋಜಕತ್ವದಲ್ಲಿ ನಡೆದ 16ನೇ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಮಾರೋಪ ಸಮಾರಂಭದಲ್ಲಿ ಸರ್ವಾದ್ಯರಾಗಿ ಮಾತನಾಡಿದರು.
ವಿದ್ವಾಂಸರಾದ ಕುಕ್ಕಿಲ ಕೃಷ್ಣಭಟ್ಟರು ಸಂಸ್ಕøತದ ಏಕಲಗಾನವು ಯಕ್ಷಗಾನವೆನ್ನುವ ರೂಪ ಪಡೆದಿದೆ ಎಂದು ಅಭಿಪ್ರಾಯಿಸಿದ್ದಾರೆ. ವಿದ್ವಾಂಸ ಮುಳಿಯ ತಿಮ್ಮಪ್ಪಯ್ಯ ಎಕ್ಕಳಗಾನ ಎನ್ನುವುದು ಯಕ್ಷಗಾನದ ತದ್ಭವ ಎಂದಿದ್ದಾರೆ. ಒಟ್ಟು ಅಲೌಕಿಕರಾದ ದೇವತಾವಿಷಯಯಕವಾದ ಕಾವ್ಯ ಯಕ್ಷಗಾನ ಅನ್ನುವುದೇ ಸೂಕ್ತ ಎಂದರು. ಸಂತೋಷವನ್ನು ಕೊಡುವಲ್ಲಿ ಕ್ರೀಡೆ ಸಹಕಾರಿ ಎನ್ನುವುದರಿಂದ ಅನ್ವರ್ಥರ್ತ ಕಾವ್ಯಕ್ರೀಡೆ ಎನ್ನುವ ಪದ ಪ್ರಯೋಗವೂ ಇದೆ. ಅಲ್ಲದೆ ದೇವರ ಆಟ, ಕೃಷ್ಣನ ಆಟ, (ಕೇರಳದ ಒಂದು ಕಲೆ) ಇದ್ದಂತೆಆಟ ಎನ್ನುವುದಕ್ಕೆ ಲೀಲೆ ಎನ್ನುವ ಅರ್ಥವೂ ಇದೆ. ಆಗ ದೇವರ ಲೀಲೆಯನ್ನು ತೋರಿಸುವ ಕಲಾಪ್ರಕಾರಕ್ಕೆ ಆಟ ಎಂದಾಯಿತು. ಇದು ಯಕ್ಷಗಾನಕ್ಕೆ ಹೊಂದುವ ಸೂಕ್ತವಾದ ನೊಷ್ಪತ್ತಿ ಅನ್ನಬಹುದು ಎಂದಭಿಪ್ರಾಯಿಸಿದರು.
ಹೀಗೆ ಯಕ್ಷಗಾನವದೊಂದಿಗೆ ಅನ್ಯಾನ್ಯಶಾಸ್ತ್ರಗಳ ಮತ್ತು ಸಂಸ್ಕøತಶಾಸ್ತ್ರೋಕ್ತ ಪರಿಭಾಷೆಗಳ ಪಾರಸ್ಪರಿಕ ಸಂಬಂಧದ ಅಧ್ಯಯನದಂದ ಅರಿವು ವಿಸ್ತಾರವಾಗಿ ವಿವೇಕೋದಯವಾಗಿ ವೇದಗಳ ಆಶಯವಾದ ಒಂದೇ ಕರ್ಮದಲ್ಲಿ ಪ್ರವೃತ್ತರಾಗಿರುವ ಈ ಋತ್ವಿಜ್ಯಮಾನರ ಮತ್ತು ಸ್ತೋತ್ರಜನರ ಮಂತ್ರೋಚ್ಛಾರಣವು ಒಂದೇ ವಿಧವಾಗಿರಲಿ. ಅವುಗಳ ಫಲವು ಎಲ್ಲರಿಗೂ ಸಮಾನವಾಗಿ ಲಭಿಸಲಿ ಅವರ ಮನಃಪ್ರವೃತ್ತಿಯು ಒಂದೇ ವಿಧವಾಗಿರಲಿ ಎನ್ನುವ ಉದ್ದೇಶದಿಂದ ದೇವತೆಗಳೇ ನಿಮಗೆ ಒಂದೇ ವಿಧವಾದ ಮಂತ್ರದಿಂದ ಹವಿಸ್ಸುಗಳನ್ನುಸಂಸ್ಕರಿಸುತ್ತಿದ್ದೇವೆ ಮತ್ತು ಹೋಮಿಸುತ್ತಿದ್ದೇವೆ ಎನ್ನುವ ಮಂತ್ರದ ಆಶಯ ಸಾಕಾರಗೊಳ್ಳುತ್ತದೆ ಎಂದು ವಿವರಿಸಿದರು.
ಮುಂಬೈ ಪದವೀಧರ ಯಕ್ಷಗಾನ ಸಮಿತಿ ಅಧ್ಯಕ್ಷ ಹೆಚ್.ಬಿ.ಎಲ್. ರಾವ್ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಗತರಾಗಿ ಡಾ.ಸುರೇಶ್ ಎಸ್. ರಾವ್, ಗೋಪಿಕಾ ಮಯ್ಯ, ಅರ್ಚಕರಾದ ಹರಿಭಟ್, ವಾಸುದೇವ ಐತಾಳ್ ವೇದಿಕೆಯಲ್ಲಿದ್ದರು.
ಭಾಗವತರಾದ ಜಯಲಕ್ಷ್ಮೀ ದೇವಾಡಿಗ ಅವರಿಗೆ ಮುಚ್ಚೂರು ನಾರಾಯಣ ಭಟ್ ಸಂಸ್ಮರಣ ಪ್ರಶಸ್ತಿ, ಗುರು ಸದಾನಂದ ಶೆಟ್ಟಿ ಕಟೀಲು ಅವರಿಗೆ ಪಿ.ವೆಂಕಟ್ರಾಯ ಐತಾಳ ಸಂಸ್ರಣ ಪ್ರಶಸ್ತಿ, ನೇಪಥ್ಯ ವ್ಯವಸ್ಥಾಪಕ ಕೃಷ್ಣ ಬಂಗೇರಗೆ ಪದವೀಧರ ಯಕ್ಷಗಾನ ಸಮಿತಿಯ ಪ್ರಶಸ್ತಿ ಪ್ರಧಾನಿಸಲಾಯಿತು.
ಮದ್ದಳೆ ಮತ್ತು ಚೆಂಡೆ ವಾದಕಿ ಕು.ಅಪೂರ್ವ ಆರ್. ಸುರತ್ಕಲ್, ಭಾಗವತಿಕೆಯಲ್ಲಿ ರೋಶನ್ ಕೋಟ್ಯಾನ್, ಮೃದಂಗ ವಾದಕ ಹರೀಶ್ ಸಾಲ್ಯಾನ್, ಬಡಗು ತಿಟ್ಟಿನ ವೇಷಧಾರಿ ರಮೇಶ್ ಬಿರ್ತಿ, ಭಾಗವತರಾದ ರಾಘವೇಂದ್ರ ಭಟ್, ವೇಷಧಾರಿ ಪ್ರತೀಕ್ಷಾ ಎಸ್. ಪೂಜಾರಿ, ಸಿತಾರ್ ವಾದಕಿ ನಂದಿತಾಗುರು ಆಚಾರ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬಿಲ್ಲವರ ಎಸೋಸಿಯೇಶನ್ ಗೌ.ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಸ್ವಾಗತಿಸಿದರು. ಕವಯತ್ರಿ ಅನಿತಾ ಪೂಜಾರಿ ತಾಕೊಡೆ, ವಾಸುದೇವ ಐತಾಳ್ ಅಭಿನಂದನೆ ಸಲ್ಲಿಸಿದರು. ಎಸ್.ಕೆ. ಸುಂಜರ್, ವಾಸುದೇವ ಐತಾಳ್, ಸಾ.ದಯಾ ಸನ್ಮಾನ ಪತ್ರ ವಾಚಿಸಿದರು. ಡಾ. ಮಮತಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.