ಮೂಲ್ಕಿ: ಕರಾವಳಿ ಭಾಗದ ಕಂಬಳ ಕ್ರೀಡೆ ವಿಶ್ವಮಟ್ಟದಲ್ಲಿ ಗುರತಿಸಲ್ಪಟ್ಟಿದ್ದು, ಇದಕ್ಕೆ ಕೊಂಡಿಯಂತಾಗಿರುವ ಕ್ರೀಡೋತ್ಸವವು ಕೆಸರುಗದ್ದೆಯಲ್ಲಿ ಸಂಯೋಜಿಸಿ ಮುಂದಿನ ಯುವ ಪೀಳಿಗೆಗೆ ಜನಪದ ಕ್ರೀಡೆಯನ್ನು ಜಗಜ್ಜಾಹಿರುಗೊಳಿಸುವ ಅಗತ್ಯವಿದೆ ಎಂದು ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ ಹೇಳಿದರು.
ಅವರು ಪಡುಪಣಂಬೂರು ಮೂಲ್ಕಿ ಸೀಮೆಯ ಅರಸು ಕಂಬಳದ ಆಶ್ರಯದಲ್ಲಿ ನಡೆದ ಕೆಸರುಗದ್ದೆ ಕ್ರೀಡೋತ್ಸವವನ್ನು ಬಾಕಿಮಾರು ಗದ್ದೆಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಉತ್ರುಂಜೆಗುತ್ತು ಭುಜಂಗ ಎಂ. ಶೆಟ್ಟಿ ಕೊಲ್ನಾಡು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಊರಿನ ಜಾತ್ರೆಯ ಪರಿಕಲ್ಪನೆಯ ಕಂಬಳವನ್ನು ಬಾಲ್ಯದಿಂದಲೂ ನೋಡುತ್ತಾ ಆಸ್ವಾದಿಸುತ್ತಾ ಇರುವ ನನ್ನಂತವರಿಗೆ ಈ ಬಾರಿ ಕಂಬಳ ಇಲ್ಲ ಎನ್ನುವಾಗ ಆದ ನೋವು ಕೋಣಗಳನ್ನು ಮಕ್ಕಳಂತೆ ಸಾಕಿದವರ ಮನದಲ್ಲಿ ಇರುವುದು ಅಷ್ಟೇ ಸತ್ಯವಾಗಿದೆ. ನ್ಯಾಯಾಲಯವು ಶೀಘ್ರವಾಗಿ ಕಂಬಳ ಮೇಲಿನ ನಿಷೇಧವನ್ನು ತೆರವುಗೊಳಿಸಲು ಸಂಘಟಿತರಾಗಿ ಪ್ರಯತ್ನಿಸಬೇಕು ಎಂದರು.
ಪಂಜದಗುತ್ತು ಶಾಂತರಾಮ ಶೆಟ್ಟಿ, ಪ್ರಕಾಶ್ ಶೆಟ್ಟಿ, ಹಳೆಯಂಗಡಿ ಪಿಸಿಎ ಬ್ಯಾಂಕ್ನ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ದಾಸ್, ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಶಶೀಂದ್ರ ಎಂ. ಸಾಲ್ಯಾನ್, ಕೋಶಾಧಿಕಾರಿ ಕೆ.ವಿಜಯ್ ಶೆಟ್ಟಿ, ನ್ಯಾಯವಾದಿ ಚಂದ್ರಶೇಖರ ಜಿ., ಕ್ರೀಡೋತ್ಸವದ ಸಂಚಾಲಕ ಶ್ಯಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ ಸೀಮೆಯ ಅರಸು ಕಂಬಳ ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ ಸ್ವಾಗತಿಸಿದರು, ಕಾರ್ಯದರ್ಶಿ ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿ, ವಂದಿಸಿದರು.