ಮಂಗಳೂರು: ಯಾವ ಕಾರಣಕ್ಕೂ ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಮುಂದುವರಿಸಬಾರದು.ಬಿಜೆಪಿ ಅವಧಿಯಲ್ಲಾದ ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಮುಂದುವರಿಸುವುದು ಉಚಿತವಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಂಕಾರ ಬದಿಗಿಟ್ಟು ಈ ಯೋಜನೆಯನ್ನು ಕೈಬಿಡಬೇಕು ಮತ್ತು ಕಾಂಗ್ರೆಸ್ ಪಕ್ಷ ಉಳಿಸುವ ಕೆಲಸ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅಧಿಕಾರಕ್ಕೆ ಅಂಟಿಕೊಳ್ಳಬಾರದು.ಕೋಲಾರ ಜನತೆಗೆ ನೀರು ಒದಗಿಸುವುದಕ್ಕಾಗಿ ಕರಾವಳಿಯ ಜನತೆಗೆ ಅನ್ಯಾಯ ಮಾಡಬಾರದು.ಕೇಂದ್ರ ಅರಣ್ಯ ಸಚಿವ ಅನಿಲ್ ಮಾಧವ ಧವೆ ಎತ್ತಿನಹೊಳೆ ಯೋಜನೆಗೆ ಅನುಮತಿ ನೀಡಿಲ್ಲ ಎಂದು ಹೇಳಿಕೆ ನೀಡಿದ ಬಳಿಕವೂ ಯೋಜನೆಯನ್ನು ಮಾಡಿಯೇ ಸಿದ್ಧ ಎಂದು ಹೇಳುತ್ತಿರುವುದು ಖಂಡನೀಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.