ಹಳೆಯಂಗಡಿ, ಡಿ.31: ಒಂಭತ್ತು ಮಾಗಣೆಯ ಕೂಡುಕಟ್ಟಿನಲ್ಲಿ ಮೂಲ್ಕಿ ಸೀಮೆಯ ಅರಸು ಕಂಬಳಕ್ಕೆ ಸಾಂಪ್ರದಾಯಿಕ ರೀತಿಯಲ್ಲಿ ಎಲ್ಲಾ ವಿಧಿ ವಿಧಾನವನ್ನು ನಡೆಸಲಾಗಿದೆ. ನ್ಯಾಯಾಂಗದ ಮೇಲಿನ ನಂಬಿಕೆ ವಿಶ್ವಾಸ ಇನ್ನೂ ಜೀವಂತವಾಗಿದ್ದು, ಮುಂದಿನ ದಿನದಲ್ಲಾದರೂ ಕಂಬಳ ಕ್ರೀಡೆ ಗತವೈಭವವನ್ನು ಕಾಣಬಹುದು ಎಂಬುದು ಸೀಮೆಯ ಜನತೆಯ ಆಶಯ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತ ಅರಸು ಹೇಳಿದರು.
ಅವರು ಪಡುಪಣಂಬೂರು ಅರಮನೆಯ ಮೂಲ್ಕಿ ಸೀಮೆಯ ಅರಸು ಕಂಬಳವನ್ನು ಸಾಂಪ್ರದಾಯಿಕ ರೀತಿಯಲ್ಲಿ ಅರಮನೆಯ ಚಂದ್ರನಾಥ ಬಸದಿಯಲ್ಲಿ ವಿಧಿ ವಿಧಾನಕ್ಕೆ ಚಾಲನೆ ನೀಡಿ ಆಶೀರ್ವಚಿಸಿದರು.
ಈ ಸಂದರ್ಭದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಿಗೆ, ಅರಮನೆಯ ಚಂದ್ರನಾಥ ಸ್ವಾಮಿ ಬಸದಿ, ಪದ್ಮಾವತಿ ಅಮ್ಮನವರ ಬಸದಿ, ಪಕ್ಕದ ನಾಗಬನಕ್ಕೆ ವಿಶೇಷ ಪ್ರಾರ್ಥನೆ ನಡೆಸಿ ಕಂಬಳದ ಕರೆಗೆ ದೈವದ ಆರಾಧನೆ ಮೂಲಕ ಬಾಕಿಮಾರು ಗದ್ದೆಯಲ್ಲಿಳಿದು, ಕಂಬಳ ಮಂಜೊಟ್ಟಿಯಲ್ಲಿ ದೀಪವನ್ನು ಬೆಳಗಿಸಿ, ಬಪ್ಪನಾಡು ಬಡುಗುಹಿತ್ಲುವಿನ ದಿ.ಕಾಂತು ಪೂಜಾರಿ ಮತ್ತು ಅರಮನೆಯ ಜೋಡಿ ಕೋಣಗಳ ಸಂಚರಿಸುವಿಕೆಯೊಂದಿಗೆ ಕಂಬಳದ ಸಂಪ್ರದಾಯವನ್ನು ನಡೆಸಿ ಕೊನೆಗೆ ದೈವದ ನರ್ತನ ಮೂಲಕ ಸಮಾಪ್ತಿಗೊಳಿಸಲಾಯಿತು. ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ದಿನಪೂರ್ತಿ ಉಪವಾಸ ವೃತದಲ್ಲಿ ತಮ್ಮನ್ನು ಕಂಬಳದ ದಿನದ ಮಹತ್ವದಲ್ಲಿ ತೊಡಗಿಸಿಕೊಂಡು ಬಂದಂತಹ ಅತಿಥಿಗಳಿಗೆ ಆತಿಥ್ಯವನ್ನು ಅರಮನೆಯಲ್ಲಿ ನೀಡಿದರು.