ಮುಂಬಯಿ, ಡಿ.31: ಸಯಾನ್ ಪೂರ್ವದಲ್ಲಿನ ಬಿಎಸ್ಕೆಬಿ ಅಸೋಸಿಯೇಶನ್ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಸಂಸ್ಥೆಯ ನೂತನ ಭವ್ಯ ಗೋಕುಲ ನಿರ್ಮಾಣ ಪ್ರಯುಕ್ತ ಗೋಕುಲ ಮಂದಿರದಲ್ಲಿನ ಶ್ರೀ ಗೋಪಾಲ ಕೃಷ್ಣ ದೇವರನ್ನು ಇಂದಿಲ್ಲಿ ಶನಿವಾರ ಸಂಜೆ ಅಶ್ವತದಳದ ಚಾರೋಟಿಯಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಅನಂತ ಅಸ್ರಣ್ಣರವರ ಸಾರಥ್ಯದೊಂದಿಗೆ ಶ್ರೀದೇವರ ಮಂಗಳಮೂರ್ತಿ ಯನ್ನು ಭವ್ಯ ಮೆರವಣಿಗೆಯೊಂದಿಗೆ ನವಿಮುಂಬಯಿ ಸೀವುಡ್ಸ್ನ ಆಶ್ರಯದ ಬಾಲಾಲಯಕ್ಕೆ ಕೊಂಡೊಯ್ಯ ಲಾಯಿತು.
ಅಸಂಖ್ಯ ಭಕ್ತಾದಿಗಳ ಆರಾಧನೆ, ವೈಭವೋಪೇತ ಮೆರವಣಿಗೆಯೊಂದಿಗೆ ನಾರಾಯಣ ಬೆಳ್ತಂಗಡಿ ಅವರ ಶೆಟ್ಟಿ ಆರ್ಟ್ಸ್ನ ಮೈಸಾಸುರ, ಉಗ್ರನರಸಿಂಹ, ಅಕಡಿ, ಟೋಲಿಗೆ, ರಾಜರಾಣಿ, ಎರಡೆರಡು ಕರಗ, ಜೋಕರ್ಗಳ ಸಹಭಾಗಿತ್ವ, ಪುಣ್ಯ ಕಲಶಗಳ ಸಮಾಗಮನ, ಕೋಲಾಟ, ಲೇಜಿಮ್, ಕೀಲು ಕುದುರೆ, ತಟ್ಟೀರಾಯ, ಯಕ್ಷಗಾನ ವೇಷಧಾರಿ ಮತ್ತಿತರ ನೃತ್ಯಗಳೊಂದಿಗೆ ಸುವಾಸಿನಿಯರ ಭಕ್ತಿಪೂರ್ವಕ ಭಜನೆ ಮತ್ತು ಪುಣ್ಯಕಲಶಗಳ, ಅಶ್ವತಪುರ ಶಾರದಾಕೃಷ್ಣ ಮ್ಯೂಸಿಕಲ್ ತಂಡದ ಎರಡು ಬೇತಾಳ, ದೈವಗಳು, ಹುಲಿ ಕುಣಿತ, ಕೊಂಬು ವಾದ್ಯ ಬ್ಯಾಂಡುಗಳ ನೀನಾದ, ವಾದ್ಯಘೋಷ, ವಿವಿಧ ಭಜನಾ ಮಂಡಳಿಗಳ ಕೋಲಾಟ ಇತ್ಯಾದಿಗಳ ಮೇಳೈಕೆಯೊಂದಿಗೆ ಶ್ರೀ ದೇವರ ಮೂರ್ತಿಯನ್ನು ಗೋಕುಲದಿಂದ ಷಣ್ಮುಖಾನಂದ ಸಭಾಗೃಹ, ಗಾಂಧಿ ಮಾರ್ಕೆಟ್ ಮಾರ್ಗವಾಗಿ ಬೃಹತ್ ಮೆರವಣಿಗೆಯಲ್ಲಿ ಸಯಾನ್ನ ಸ್ಥಾನೀಯ ಶ್ರೀ ಹನುಮಾನ್ ಮಂದಿರಕ್ಕೆ ತರಲಾಗಿ ಬಳಿಕ ನವಿಮುಂಬಯಿ ಅಲ್ಲಿನ ಸೀವುಡ್ಸ್ನ ಆಶ್ರಯದ ಬಾಲಾಲಯಕ್ಕೆ ಬರಮಾಡಿ ಕೊಳ್ಳಲಾಯಿತು.
ಸಯಾನ್ ಪರಿಸರದಲ್ಲಿನ ಸಾವಿರಾರು ಭಕ್ತರ ಆರಾಧ್ಯ ಮೂರ್ತಿಯಾಗಿ ನೆಲೆಯಾಗಿದ್ದ ಶ್ರೀಕೃಷ್ಣನ ಕೃಪಾಕಟಾಕ್ಷಕ್ಕೆ ಧನ್ಯರೆಣಿಸಿದ ಭಕ್ತರು ಭಾವೋದ್ವೆಕರಾಗಿ ಭಕ್ತಿಪೂರ್ವಕವಾಗಿ ಶ್ರೀದೇವರನ್ನು ಬಾಲಾಲಯಕ್ಕೆ ಒಯ್ದರು. ಈ ಸಂದರ್ಭದಲ್ಲಿ ಬಿಎಸ್ಕೆಬಿ ಅಸೋಸಿಯೇಶನ್ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಸಂಸ್ಥೆಯ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಬಿಎಸ್ಕೆಬಿಎ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಪಿ.ಉಮೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಕಾರ್ಯದರ್ಶಿ ವಿಶ್ವಸ್ಥ ಸದಸ್ಯ ಎ.ಎಸ್ ರಾವ್, ಧರ್ಮಪಾಲ ಯು.ದೇವಾಡಿಗ, ಸುರೇಂದ್ರ ಕುಮಾರ್ ಹೆಗ್ಡೆ, ಪದ್ಮಾನಾಭ ಸಸಿಹಿತ್ಲು ಸೇರಿದಂತೆ ಉಭಯ ಸಂಸ್ಥೆಗಳ ಸದಸ್ಯರನೇಕರು ಉಪಸ್ಥಿತರಿದ್ದರು.