ಮಂಗಳೂರು: ಯಾವುದೇ ಸರಕಾರ ಬಂದರೂ ಎತ್ತಿನಹೊಳೆ ಯೋಜನೆ ಜಾರಿಯಾಗದೆ ಇರುವುದಿಲ್ಲ. ಡಿ. 26ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳ ಸಲಹೆಯನ್ನು ಒಪ್ಪಿಕೊಂಡು ಬಂದ ಕೆಲವು ಹೋರಾಟಗಾರರು ರಾಜಕೀಯ ಅಸ್ತಿತ್ವ
ಕೋಸ್ಕರ ಅಮಾಯಕರ ಮೇಲೆ ಆರೋಪ ಹೊರಿಸುವ ಕಾರ್ಯ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೋರಾಟಗಾರರ ಮನವಿಯ ಮೇರೆಗೆ ಚರ್ಚೆಗೆ ಅವಕಾಶ ನೀಡುವಂತೆ ನಾನೇ ಮುಖ್ಯಮಂತ್ರಿಗಳ ಬಳಿ ಕೇಳಿದ್ದೆ. ಅದರಂತೆ ಸುಮಾರು ಒಂದೂವರೆ ತಾಸು ಕಾಲ ಸಭೆ ನಡೆದು ವಿಷಯ ತಜ್ಞರ ಜತೆ ಚರ್ಚಿಸುವಂತೆ ಸಿಎಂ ಅವರ ಹೇಳಿಕೆಗೆ ಸಂಸದ ನಳಿನ್, ವಿಧಾನ ಪರಿಷತ್ ಸದಸ್ಯ ಕಾರ್ಣಿಕ್ ಸಹಿತ ಹೋರಾಟಗಾರರು ಒಪ್ಪಿಗೆ ಸೂಚಿಸಿದ್ದರು ಎಂದರು.ಯಾರನ್ನೂ ಬೈದಿಲ್ಲ ಸಭೆಯಲ್ಲಿ ನಾನು ಹಿಂದಿನ ವಿಚಾರ ಮಾತನಾಡುವ ವೇಳೆ ಹಿಂದಿನ ವಿಚಾರ ಬೇಡ ಎಂದಾಗ ಯಾಕೆ ಎಂದು ಕೇಳಿ ಚರ್ಚೆ ನಡೆದಿತ್ತೇ ವಿನಃ ನಾನು ಯಾರನ್ನೂ ಬೈದಿಲ್ಲ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ನ ಸಣ್ಣ ಕಾರ್ಯಕರ್ತನಿಂದ ಹಿಡಿದು ದೊಡ್ಡ ನಾಯಕರ ವರೆಗೆ ವೈಯಕ್ತಿಕವಾಗಿ ಹಿಂದೆಯೂ ದೂರಿಲ್ಲ, ಮುಂದೆಯೂ ದೂರುವುದಿಲ್ಲ.
ಆದರೆ ಇಂದು ನನ್ನ ಜತೆಗೆ ಓದಿ ಬೆಳೆದವರೇ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವನಾಗಿ ಅದಕ್ಕೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕ ಮೊದಿನ್ ಬಾವಾ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್ ಮೊದಲಾದವರು ಉಪಸ್ಥಿತರಿದ್ದರು.