ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಗ್ರಾಮೀಣಾಭಿವೃಧ್ಧಿ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ(U Penn)ವು, , Outstanding Leadership in Rural Development & Women Empowerment ಎಂಬ ಪ್ರಶಸ್ತಿಯನ್ನು ನೀಡಿ ಸಮ್ಮಾನಿಸಿದೆ. ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಪೆÇ್ರಫೆಸರ್ ಫೆಮಿಡಾ ಹ್ಯಾಂಡಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಗ್ಗಡೆಯವರನ್ನು ಸಮ್ಮಾನಿಸಿ ಫಲಕ ನೀಡಿದರು. ವಿಶ್ವವಿದ್ಯಾನಿಲಯದ 9 ವಿದ್ಯಾರ್ಥಿಗಳನ್ನೊಳಗೊಂಡ ತಂಡವು 2 ದಿನಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳ ವಿಶೇಷ ಅಧ್ಯಯನಕ್ಕಾಗಿ ಆಗಮಿಸಿದ್ದು ಯೋಜನೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿತು. ಗ್ರಾಮೀಣಾಭಿವೃಧ್ಧಿ, ಮಹಿಳಾ ಸಬಲೀಕರಣ ಹಾಗೂ ಬದಲಿ ಇಂಧನ ಕ್ಷೇತ್ರದಲ್ಲಿ ಯೋಜನೆಯ ಅನುಭವವನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಂಡದೊಂದಿಗೆ ಹಂಚಿಕೊಂಡರು. ಯೋಜನೆಯ ಕೇಂದ್ರ ಕಛೇರಿಗೆ ಭೇಟಿ ನೀಡಿದ ತಂಡಕ್ಕೆ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಮಮತಾ ಹರೀಶ್ ರಾವ್ ಸಂಸ್ಥೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕೇಂದ್ರ ಕಛೇರಿ ಹಾಗೂ ಉತ್ಪಾದನಾ ಘಟಕ ಹಾಗೂ ಮಾರಾಟ ಮಳಿಗೆಗೆ ಈ ತಂಡ ಭೇಟಿ ನೀಡಿತು. ಉಡುಪಿ ಜಿಲ್ಲೆಯಲ್ಲಿ ಯೋಜನೆ ಪ್ರಾಯೋಜಿತ ಪ್ರಗತಿಬಂಧು, ಸ್ವಸಹಾಯ, ಜ್ಞಾನವಿಕಾಸ ಕೇಂದ್ರ, ಒಕ್ಕೂಟ ಸಭೆಗೆ ತಂಡವು ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಸಿರಿ ನಿರ್ದೇಶಕಿ ಮನೋರಮಾ ಭಟ್, ಪ್ರಾಂಶುಪಾಲ ಸುರೇಶ್ ಸಾಲಿಯಾನ್ ಉಪನ್ಯಾಸಕ ವಸಂತ ನಾಯಕ್ ಉಪಸ್ಥಿತರಿದ್ದರು.
ನಿಟ್ಟೆ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ‘ವಿದ್ಯಾರ್ಥಿ ವಿನಿಮಯ’ ಯೋಜನೆಯಡಿ ಭಾರತಕ್ಕೆ ಆಗಮಿಸಿದ ಈ ತಂಡವು 11 ದಿನಗಳ ಕಾಲ ನಿಟ್ಟೆಯ ಪೆÇ್ರಫೆಸರ್ ವಿನೋದ್ ದೀಕ್ಷಿತ್ ನೇತೃತ್ವದಲ್ಲಿ ಅಧ್ಯಯನ ನಡೆಸಲಿದೆ.