ಕಟೀಲು ಮೇಳದ 106 ಕಲಾವಿದರ ಸನ್ಮಾನ ವೇದಿಕೆ
ಮುಂಬಯಿ, ಜ.14: ವಾಮಂಜೂರು ಲಿಂಗುಮಾರು ಶಿವಣ್ಣ ಶೆಟ್ಟಿಯ ಔದಾರ್ಯ ಇದೊಂದು ಅಪೂರ್ವ ಕ್ಷಣ. ಹಿಂದೆಂದೂ ಕಾಣದಂತಹ, ಇತಿಹಾಸ-ಪ್ರಥಮವೆನ್ನಬಹುದಾದ ಸನ್ನಿವೇಶ. ಇತ್ತೀಚೆಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳದ ಆರು ತಂಡಗಳ 106 ಹಿರಿಯ ಕಲಾವಿದರಿಗೆ ವಾಮಂಜೂರು ಲಿಂಗುಮಾರು ಶಿವಣ್ಣ ಶೆಟ್ಟಿ, ಪುತ್ರ ರಾಜಕುಮಾರ್ ಹಾಗೂ ಬಂಧುಗಳು ಆಯೋಜಿಸಿದ ಭವ್ಯ ಕಾರ್ಯಕ್ರಮವೊಂದರಲ್ಲಿ ಸ್ಮರಣಿಕೆ, ನಗದು ನೀಡಿ ಸನ್ಮಾನಿರುವುದು ಯಕ್ಷಗಾನ ಕ್ಷೇತ್ರದಲ್ಲಿ ನಿಜಕ್ಕೂ ಅಪೂರ್ವ, ಪ್ರಥಮ ಹಾಗೂ ಇತಿಹಾಸವೇ ಸರಿ ಸ್ಮರಣೀಯ ಕಾರ್ಯಕ್ರಮವೂ ಆಗಿತ್ತು. ಈ ಸುಸಂದರ್ಭದಲ್ಲಿ ಯಕ್ಷ ಕಲಾವಿದ ದಿವಂಗತ ಮಂಜೇಶ್ವರ ಜನಾರ್ದನ ಜೋಗಿಯವರ ಸಂಸ್ಮರಣಾರ್ಥವಾಗಿ ಅವರ ಪತ್ನಿಗೆ ನಗದು ಮತ್ತು ಸ್ಮರಣಕೆ ನೀಡಿ ಗೌರವಿಸಲಾಯಿತು.
ಶಿವಣ್ಣ ಅವರು ಕಳೆದ 50 ವರ್ಷಗಳಿಂದ ವಾಮಂಜೂರು ಪದವಿನಲ್ಲಿ ಕಟೀಲು ಕ್ಷೇತ್ರದ ಬಯಲಾಟ ಆಡಿಸುತ್ತ ಬಂದಿರುತ್ತಾರೆ. ಈ ವರ್ಷ ತನ್ನ ಹರಕೆಯಾಟದ ಸುವರ್ಣ ಸಂಭ್ರಮವಾಗಿದ್ದು, ಈ ನಿಟ್ಟಿನಲ್ಲಿ ಅವರಿಗೆ ಹೊಳೆದಿರುವುದು ಮೇಳದ ಹಿರಿಯ ಕಲಾವಿದರಿಗೆ ಸನ್ಮಾನಿಸುವುದಾಗಿದೆ. ಈ ಸ್ವಾಗತಾರ್ಹ ಕಾರ್ಯಕ್ರಮದ ಹಿಂದಿನ ಶಕ್ತಿ ಶಿವಣ್ಣ ಶೆಟ್ಟಿ ಮತ್ತು ಪುತ್ರ ರಾಜಕುಮಾರ್ ಆಗಿದ್ದರು.
ಕಟೀಲು ಮೇಳದ ಯಕ್ಷಗಾನ ಬಯಲಾಟದ ಹಿಂದಿನ ಹೂ, ಸುಡುಮದ್ದುಗಳ ಆಡಂಬರಕ್ಕೆ ಈ ಬಾರಿ ಎಲ್ಲೆಡೆ ಕಡಿವಾಣ ಬಿದ್ದಿದ್ದರೂ, ಇಲ್ಲಿನ ಸ್ಮರಣೀಯ ಕಾರ್ಯಕ್ರಮದಲ್ಲಿ ಅಗತ್ಯಕ್ಕೆ ತಕ್ಕಂತೆ ಕದೋನಿ ಸಿಡಿಸಲಾಗಿತ್ತು ಮತ್ತು ಮಂಟಪ ಅಲಂಕರಿಸಲಾಗಿತ್ತು.
106 ಕಲಾವಿದರಲ್ಲದೆ, ಸುಮಾರು 50 ವರ್ಷಗಳಲ್ಲಿ ಇವರೊಂದಿಗೆ ಸಹಕರಿಸಿದ ಇತರ ಕೆಲವು ಗಣ್ಯರಿಗೂ ಸ್ಮರಣಿಕೆ ನೀಡಿ ಗೌರವಾರ್ಪಣೆ ಸಂದಾಯ ಮಾಡಿರುವುದು ಒಂದು ಸ್ಮರಣೀಯ ಸಂಗತಿಯಾಗಿತ್ತು. ಒಟ್ಟು 147 ಮಂದಿಯ ಸನ್ಮಾನದ ವೇದಿಕೆಯಾಗಿತ್ತು ಅಂದಿನ ಸುವರ್ಣ ಯಕ್ಷ ಮಹೋತ್ಸವ ಕಾರ್ಯಕ್ರಮ.
``ಒಬ್ಬ ಪ್ರಸಿದ್ಧ ಕಲಾವಿದನಿಗೆ ಮಾತ್ರ ಅಲ್ಲಿ-ಇಲ್ಲಿ ಸನ್ಮಾನಿಸುವುದು ಉಂಟು. ಮೇಳದಲ್ಲಿ, ಅದರಲ್ಲೂ ಚೌಕಿಯೊಳಗೆ ಅದೆಷ್ಟೋ ವರ್ಷಗಳಿಂದ ಸೇವೆಗೈದ ಸಿಬ್ಬಂದಿಗೆ ಸನ್ಮಾನ ವಿರಳ. ಈ ನಿಟ್ಟಿನಲ್ಲಿ ಮೇಳದ ಹಿರಿಯ ಕಲಾವಿದರೊಂದಿಗೆ ತಾರತಮ್ಯವಿಲ್ಲದೆ, ಸಮಾನತೆಯಡಿ ಕೆಲವು ಅರ್ಹ ಹಾಗೂ ಹಿರಿಯ ಸಿಬ್ಬಂದಿಯನ್ನೂ ಗುರುತಿಸಿ ಸನ್ಮಾನಿಸಲು ನಿರ್ಧರಿಸಿದೆವು. ಈ ನಿಟ್ಟಿನಲ್ಲಿ ಪಟ್ಲ ಫೌಂಡೇಶನಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾಗವತ ಸತೀಶರನ್ನು ಪ್ರತ್ಯೇಕವಾಗಿ ಸನ್ಮಾನಿಸಿದ್ದೇವೆ'' ಎಂದು ರಾಜಕುಮಾರ್ ಅಭಿಮಾನದಿಂದ ಪ್ರತಿಕ್ರಿಯಿಸಿದರು. ಒಟ್ಟಾರೆಯಾಗಿ, ಈ ಕಾರ್ಯಕ್ರಮ ಯಕ್ಷಗಾನ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿತ್ತು ಎಂದರೆ ಅತಿಶಯೋಕ್ತಿಯಾಗಲಾರದು.