ಗುರುಸೇವಾ ಪರಿಷತ್ ಕಟಪಾಡಿ ಕೇಂದ್ರ ಸಮಿತಿ ಉದ್ಘಾಟನೆ
ಮುಂಬಯಿ,ಜ.17:ಮನಕ್ಕೊಪ್ಪುವ ರೀತಿಯಲ್ಲಿ ಕೆಲಸ ಮಾಡಿದಲ್ಲಿ ಅದು ಭಗವದರ್ಪಣೆ ಆಗುತ್ತದೆ. ಹಾಗಾಗಿ ನೆನಪಿಲ್ಲದ, ಮರೆತು ಹೋದ, ಪರೋಪಕಾರದ ಕ್ಷಣಗಳೇ ಬದುಕನ್ನು ಸಾಥ್ಯಕ್ಯದೆಡೆ ಕೊಂಡೊಯ್ಯುತ್ತದೆ. ಒಳಿತು ಕೆಡುಕುಗಳನ್ನು ಪರಾಂಬರಿಸಿ ಕೆಲಸ ಮಾಡಬೇಕು. ಸಮಾಜದ ಉನ್ನತ ಚಿಂತನೆ, ಸೇವಾ ಕೈಂಕರ್ಯದಿಂದ ಜೊತೆಗೆ ಶ್ರೀ ಮಠ ಮತ್ತು ಸಮಾಜ ಬಾಂಧವರ ನಡುವೆ ಸೇತುವೆಯಾಗಿ ಗುರುಸೇವಾ ಪರಿಷತ್ ಕಾರ್ಯಪ್ರವೃತ್ತರಾಗಬೇಕು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀಪೀಠ ಕಟಪಾಡಿ ಇದರ ಪೀಠಾಧೀಶ್ವರರಾದ ಅಷ್ಟೋತ್ತರಶತಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಹೇಳಿದರು. ಅವರು ಭಾನುವಾರ ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ಸಭಾಭವನದಲ್ಲಿ ನಡೆದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಇದರ ಗುರುಸೇವಾ ಪರಿಷತ್ ಇದರ ಕೇಂದ್ರ ಸಮಿತಿ ಉದ್ಘಾಟಿಸಿ ಆಶೀರ್ವಚಿಸಿದರು.
ವಿದ್ವಾನ್ ಪಂಜ ಭಾಸ್ಕರ್ ಭಟ್ ಧಾರ್ಮಿಕ ಉಪಾನ್ಯಾಸದಲ್ಲಿ, ದೂರದೃಷ್ಟಿತ್ವದ ಜ್ಞಾನದ ಅನುಗ್ರಹದ ಆಶೀರ್ವಾದ ಗುರುಗಳಿಂದ ಆಗದಿದ್ದಲ್ಲಿ ಭಗವದನುಗ್ರಹ ಅಸಾಧ್ಯ. ಸಮಾಜಕ್ಕಾಗಿ ಗುರುಗಳ ತುಡಿತವನ್ನು ತಿಳಿಸುವಲ್ಲಿ ಗುರುಸೇವಾ ಪರಿಷತ್ ಕಾರ್ಯಾಚರಿಸುವ ಮೂಲಕ ಸಮಾಜದ ಜನರ ಜೀವನ ಅಭ್ಯುದಯಕ್ಕೆ ಸಹಕಾರಿಯಾಗಲಿ ಎಂದರು.
ಶ್ರೀ ಮಠದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಮಾಜಿ ಸಚಿವ, ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ವಿಶ್ವಕರ್ಮರ ಕೌಶಲ್ಯತೆ ದೇಶದ ಅತೀದೊಡ್ಡ ಸಂಪತ್ತು. ಬೆಳಕಿಗೆ ಬರುವಲ್ಲಿ ಅವಕಾಶದ ಕೊರತೆಯನ್ನು ಎದುರಿಸುತ್ತಿದೆ. ವಿದ್ಯುತ್ ಸ್ಥಾವರದಂತೆ ಶಕ್ತಿಯುತವಾಗಿರುವ ಗುರುಗಳ ಮತ್ತು ಸಮಾಜದ ನಡುವೆ ತಂತಿಯಂತೆ ಈ ಗುರುಸೇವಾ ಪರಿಷತ್ ಕರ್ತವ್ಯ ನಿಭಾಯಿಸಲಿ ಎಂದರು.
ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಶಿಕ್ಷಣ-ಸಮಾಜ ಕಲ್ಯಾಣ ನಿಧಿ ಸಂಗ್ರಹ ಅಭಿಯಾನದ ಮನವಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ, ಸಮಾಜದ ಅರಿವು ಪಸರಿಸಲು ಗುರು ಬೇಕು. ಜಗ್ಗಾಟಗಳ ಜಾತ್ರಯಿಂದ ಚದುರುವ ಸಮಾಜಕ್ಕೆ ಗುರುಗಳ ಮಾರ್ಗದರ್ಶನ ಅವಶ್ಯ ಎಂದರು.
ಆನೆಗುಂದಿ ಪ್ರತಿಷ್ಠಾನದ ಮುಂಬೈ ವಲಯ ಸಮಿತಿ ಕಾರ್ಯದರ್ಶಿ ಮುಂಬಯಿ ಜಿ.ಟಿ ಆಚಾರ್ಯ ಮಾತನಾಡಿ, ಸೇವೆಗಳು ತೋರಿಕೆಗಾಗಿ ಇರಬಾರದು. ಅದು ಹೃದಯದಿಂದ ಬಂದಾಗ ಮಾತ್ರ ಸೇವಾ ಸಾರ್ಥಕ್ಯ ಪಡಿಸುತ್ತದೆ. ಯೋಚನೆಗಳು ಯೋಜನೆಗಳಾಗಿ ಬಳಕೆಗೆ ಬಂದಾಗ ಸಮಾಜೋದ್ಧಾರ ಆಗುತ್ತದೆ. ಶ್ರೀಮಠ, ಗುರುಪೀಠದ ಬಗೆಗಿನ ತಪ್ಪು ತಿಳುವಳಿಕೆಯು ಸಮಾಜದ ದುರಾದೃಷ್ಟವಾಗಿದೆ. ಪೀಠ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಮಾಜದ ಪ್ರತಿಯೊಬ್ಬರೂ ಸಂಪಾದನೆಯ ಒಂದಂಶವನ್ನಾದರೂ ಶ್ರೀ ಮಠದ ಯೋಜನೆಗಳಿಗೆ ನೀಡುವಂತೆ ಕರೆ ನೀಡಿದರು.
ಪ್ರತಿಷ್ಟಾನದ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ ಸಮಾರಮಭದ ಅಧ್ಯಕ್ಷತೆ ವಹಿಸಿದ್ದರು. ಆನೆಗುಂದಿ ಪ್ರತಿಷ್ಠಾನದ ಮುಂಬಯಿ ವಲಯ ಸಮಿತಿ ಉಪಾಧ್ಯಕ್ಷ ಶ್ರೀಧರ ವಿ.ಆಚಾರ್ಯ, ಪಂಡಿತ್ ಕಡ್ಲಾಸ್ಕರ್ ಶಂಕರಾಚಾರ್ಯ ಹುಬ್ಬಳ್ಳಿ, ಶ್ರೀಮತ್ ಆನೆಗುಂದಿ ಮಹಾಸಂಸ್ಥಾನ ಪಂಚಸಿಂಹಾಸನ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್ ಸೀತಾರಾಮ ಆಚಾರ್ಯ ಉಪ್ರಳ್ಳಿ ಮಾತನಾಡಿದರು.
ಗೌರವ ಉಪಸ್ಥಿತರಾಗಿ ಮೊಕ್ತೇಸರರುಗಳಾದ ಸುಂದರ ಆಚಾರ್ಯ ಬೆಳುವಾಯಿ, ದಯಾನಂದ ಆಚಾರ್ಯ ಬಾರ್ಕೂರು, ನಾಗರಾಜ ಆಚಾರ್ಯ ಮಂಗಳಾದೇವಿ, ಹರೀಶ್ ಆಚಾರ್ಯ ಕಾರ್ಕಳ, ಸುರೇಶ್ ಆಚಾರ್ಯ ಕೊಲಕಾಡಿ, ಮಂಜುನಾಥ ಆಚಾರ್ಯ ಉಪ್ರಳ್ಳಿ, ವಾಸುದೇವ ಆಚಾರ್ಯ ಕಾಪು, ಸದಾನಂದ ಆಚಾರ್ಯ ಭಟ್ಕಳ, ಮಧುಕರಚಂದ್ರಶೇಖರ ಆಚಾರ್ಯ ಗೋಕರ್ಣ, ಸುಂದರ ಆಚಾರ್ಯ ಕೋಟೆಕಾರು, ಉಮೇಶ ಆಚಾರ್ಯ ಪೋಳ್ಯ ಬಂಗ್ರಮಂಜೇಶ್ವರ, ಸುದಾಕರ ಆಚಾರ್ಯ ಎಡನೀರು ಕುಂಬಳೆ, ಮಧೂರು ಶ್ರೀಕಾಳಿಕಾಂಬಾ ಮಠದ ಅಧ್ಯಕ್ಷ ಪರಮೇಶ್ವರ ಆಚಾರ್ಯ ನೀರ್ಚಾಲು ವೇದಿಕೆಯಲ್ಲಿದ್ದರು.
ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ ಸ್ವಾಗತಿಸಿದರು. ಶ್ರೀಮಠದ ಪ್ರ.ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್, ಕಂಬಾರು ಪ್ರಸ್ತಾವನೆಗೈದರು. ಗುರುಸೇವಾ ಪರಿಷತ್ ಕೇಂದ್ರ ಸಮಿತಿಯ ಪ್ರ.ಕಾರ್ಯದರ್ಶಿ ರೂಪೇಶ್ ಆಚಾರ್ಯ ಶಿರ್ವ ವಂದಿಸಿದರು. ಪ್ರಕಾಶ್ ಶರ್ಮ ಬಾರ್ಕೂರು ಕಾರ್ಯಕ್ರಮ ನಿರ್ವಹಿಸಿದರು.