ಯುವ ಪೀಳಿಗೆಗೆ ಪರಿಚಯಿಸೋಣ: ಜಯ ಸಿ.ಸುವರ್ಣ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ (ಗೋವಾ-ಪಣಜಿ), ಜ.17: ಬಿಲ್ಲವರು ಇತರ ಹಿಂದುಳಿದ ವರ್ಗಕ್ಕೆ ಸೇರಿದವರೆಂಬ ಮನೋಭಾವದಿಂದ ಮುಕ್ತರಾಗಿ ನಮ್ಮಲ್ಲಿನ ಏಕತೆಯನ್ನು ಒಗ್ಗಟ್ಟಿನ ಮುಖೇನ ತೋರ್ಪಡಿಸುವ ಅಗತ್ಯವಿದೆ. ನಮ್ಮ ಪೂರ್ವಜರಿಂದ ಆರಾಧಿಸಿ ಕೊಂಡು ಬಂದ ಆರಾಧ್ಯದೈವ-ದೇವರುಗಳಾಗಲೀ, ಪರಂಪರಿಕಾ ಸಂಸ್ಕೃತಿಗಳನ್ನು ನಮ್ಮ ಪೀಳಿಗೆಗೆ ಪರಿಚಯಿಸುತ್ತಾ ಸಮುದಾಯವನ್ನು ಒಗ್ಗಟ್ಟಿನಿಂದ ಬಲಪಡಿಸುವಲ್ಲಿ ಶ್ರಮಿಸಬೇಕು. ಇಂತಹ ಶ್ರಮಕ್ಕೆ ಬಿಲ್ಲವ ಮಿಲನಗಳಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷರಾದ ಜಯ ಸಿ.ಸುವರ್ಣ ನುಡಿದರು.
ಬಿಲ್ಲವರ ಅಸೋಸಿಯೇಶನ್ ಗೋವಾ (ರಿ.) ಕಳೆದ ಭಾನುವಾರ ಗೋವಾದ ಮಡ್ಗಾಂವ್ ಅಲ್ಲಿನ ಕ್ರಿಕೇಟ್ ಕ್ಲಬ್ ಸಭಾಗೃಹದಲ್ಲಿ ಬಿಲ್ಲವ ಮಿಲನ-2017 ಕಾರ್ಯಕ್ರಮ ಆಯೋಜಿಸಿದ್ದು, ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ಜಯ ಸುವರ್ಣರು `ದೇಯಿ ಬೈದ್ಯೆತಿ-ಕೋಟಿ ಚೆನ್ನಯ' ಮೂಲಸ್ಥಾನ ಪುನರುತ್ಥಾನದ ಶಿಲಾನ್ಯಾಸ ಕಾರ್ಯಕಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಸಮಾಜ ಬಾಂಧವರನ್ನುದ್ದೇಶಿಸಿ ಮಾತನಾಡಿದರು.
ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ದೀಪ ಬೆಳಗಿಸುವ ಮೂಲಕ ಬಿಲ್ಲವ ಮಿಲನಕ್ಕೆ ಚಾಲನೆ ನೀಡಿ ಮಾತನಾಡಿ ಬಿಲ್ಲವರು ಸಾಮರಸ್ಯ ಜೀವನಕ್ಕೆ ಪ್ರೇರಕರು. ಅನ್ಯೋನ್ಯತೆಗೆ ಸ್ಪಂದಿಸುವ ಬಿಲ್ಲವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಭಾವೈಕ್ಯತಾ ಬಾಳಿಗೆ ಸಜ್ಜನ ಬಿಲ್ಲವರು ಆದರ್ಶರು ಎಂದರು.
ನಿವೃತ್ತ ಎಸ್ಪಿ ಹಾಗೂ ಗೆಜ್ಜೆಗಿರಿ ಕ್ಷೇತಾಡಳಿತ ಸಮಿತಿ ಕಾರ್ಯಾಧ್ಯಕ್ಷ ಪೀತಾಂಬರ ಹೆರಾಜೆ ಅವರು `ಗೆಜ್ಜೆಗಿರಿ ನಂದನ' ತುಳು ಭಕ್ತಿಗೀತೆ ಸಿಡಿ ಬಿಡುಗಡೆ ಗೊಳಿಸಿ ಶುಭಾರೈಸಿದರು.
ಈ ಸಂದರ್ಭದಲ್ಲಿ ಗುರುದೇವ ಕಾಜೇಜು ಬೆಳ್ತಂಗಡಿ ಇದರ ಪ್ರಾಧ್ಯಾಪಕ ಎ.ಕೃಷ್ಣಪ್ಪ ಪೂಜಾರಿ, ಬೆಳಗಾಂ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಚಿಕ್ಕಮಂಗಳೂರು ಬಿಲ್ಲವ ಒಕ್ಕೂಟದ ಅಧ್ಯಕ್ಷ ಸತೀಶ ಪೂಜಾರಿ, ಜಯಾನಂದ ಪೂಜಾರಿ, ಗುರು ಚಾರಿಟೇಬಲ್ ಟ್ರಸ್ಟ್ ಸೂರತ್ಕಲ್ ಅಧ್ಯಕ್ಷ ಗಣೇಶ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಬಿಲ್ಲವ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಗೋವಾ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಹಾಸ್ ಅಮೀನ್ ಸ್ವಾಗತಿಸಿದರು. ಕಾರ್ಯದರ್ಶಿ ಎ.ಎಸ್ ಪೂಜಾರಿ ವಂದಿಸಿದರು.