ಮುಂಬಯಿ, ಫೆ.04: ಗೋವಾ ಕಾಣಕೋಣ ಅಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದಲ್ಲಿ ಇದೇ ಫೆಬ್ರವರಿ 8 ಮತ್ತು 9 ರಂದು `ಶಿಷ್ಯ ಸ್ವೀಕಾರ ಸಮಾರಂಭ' ನೆರವೇರಿಸಲಾಗುವುದು. ಮಠದ ಧಾರ್ಮಿಕ ವಿಧಿ ಫೆಬ್ರವರಿ 8 ರಂದು ಬೆಳಿಗ್ಗೆ 6.30ರ ಕ್ಕೆ ಆರಂಭಗೊಳ್ಳಲಿದೆ. ಫೆ.9 ರಂದು ಬೆಳಿಗ್ಗೆ 9.00 ಗಂಟೆ 22 ನಿಮಿಷದ ಶುಭ ಮುಹೂರ್ತದಲ್ಲಿ ಬೆಳಗಾಂನ ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಅವರ ದ್ವಿತೀಯ ಪುತ್ರ ಉದಯ್ ಭಟ್ ಶರ್ಮಾ ಅವರಿಗೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠಾಧೀಶ ಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ ಪ್ರಣವ ಮಂತ್ರೋಪದೇಶ ಬೋಧಿಸಲಾಗುತ್ತದೆ ಎಂದು ವಡಾಲಾ ಇಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮುಂಬಯಿ ವಡಾಲಾ ಇದರ ಉಪಕಾರ್ಯಾಧ್ಯಕ್ಷ ಹಾಗೂ ಜಿಎಸ್ಬಿ ಸೇವಾ ಸಾರ್ವಜನಿಕ ಗಣೋಶ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಶಿಷ್ಯ ಸ್ವೀಕಾರ ಕಾರ್ಯಕ್ರಮದ ನಿಮಿತ್ತ ಇಂದಿಲ್ಲಿ ಶುಕ್ರವಾರ ಅಪರಾಹ್ನ ಪೋರ್ಟ್ನ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎನ್.ಎನ್ ಪಾಲ್, ಶ್ರೀ ಪರ್ತಗಾಳಿ ಸಂಸ್ಥಾನದ 23ನೇ ಗುರುವರ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಅವರು ಉದಯ ಭಟ್ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸುವ ನಿರ್ಣಯ ತೆಗೆದುಕೊಂಡಿದ್ದು, ಬೆಳಗಾಂವನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಉದಯ ಅವರನ್ನು ಮಠದ ಪಟ್ಟಶಿಷ್ಯಕ್ಕಾಗಿ ಸಿದ್ಧತೆ ನಡೆಸಿ ಕುಶಾವತಿ ನದಿ ತೀರದಲ್ಲಿರುವ ಶ್ರೀ ಸಂಸ್ಥಾನದ ಪರ್ತಗಾಳ ಕಾಣಕೋಣ ಅಲ್ಲಿರುವ ಕೇಂದ್ರ ಮಠದಲ್ಲಿ `ಶಿಷ್ಯ ಸ್ವೀಕಾರ' ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತೆಯೇ ಪ್ರಣವ ಮಂತೋಪದೇಶ ಪಡೆಯಲಿರುವ ಉದಯ ಭಟ್ ಅವರು ಉದಯ್ ಭಟ್ ಶ್ರೀಮಠದ 24ನೇಯ ಸ್ವಾಮೀಜಿ ಆಗಿ ಮಂತ್ರೋಪದೇಶ ಸ್ವೀಕರಿಸಲಿದ್ದಾರೆ. ಈ ಧಾರ್ಮಿಕ ಕಾರ್ಯಕಮಕ್ಕೆ ವಿವಿಧ ಮಠಗಳಿಂದ 20 ರಿಂದ 25 ಸಾವಿರ ಮಠಾಧಿಕಾರಿ, ಸ್ವಾಮಿಗಳು, ಹಾಗೂ ಲಕ್ಷಾಂತರ ಸಂಖ್ಯೆಯಲ್ಲಿ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಗೋವಾದಲ್ಲಿರುವ ಪರ್ತಗಾಳಿ ಮಠವು 360 ವರ್ಷಗಳಿಗಿಂತ ಪುರಾತನವಾದದ್ದಾಗಿದೆ. ಭಾರತ ರಾಷ್ಟ್ರದ ಬದ್ರೀನಾಥದಿಂದ ಹಿಡಿದು ಮುಂಬಯಿ, ಬೆಂಗಳೂರು, ಕೇರಳ, ಮತ್ತು ಗೋವಾ ಸೇರಿದಂತೆ ವಿವಿದೆಡೆ ಶ್ರೀಮಠದ 33 ಶಾಖಾ ಮಠಗಳಿವೆ. ಶಿಷ್ಯಸ್ವಾಮಿ ಮಂತ್ರೋಪದೇಶ ಕೊಡಿಸುವುದು ಶ್ರೀಮಠದ ಒಂದು ಪಾರಂಪರಿಕ ಪದ್ಧತಿಯಾಗಿದೆ. ಈ ಸಮಾರಂಭಕ್ಕೆ ಹೊರ ರಾಜ್ಯಗಳಿಂದ ಮತ್ತು ದೂರದ ಊರುಗಳಿಂದ ಆಗಮಿಸುವ ಭಕ್ತಾದಿಗಳಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ.9ರ ಗುರುವಾರ ಸಂಜೆ 6.00 ರಿಂದ 8.30 ಗಂಟೆ ತನಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕೊಂಕಣಿ ನಾಟಕ ಪ್ರದರ್ಶನವೂ ನಡೆಯಲಿದೆ ಎಂದು ಎನ್.ಎನ್ ಪಾಲ್ ತಿಳಿಸಿದರು.
ಈ ಸಂದರ್ಭದಲ್ಲಿ ಗೋರ್ಕರ್ಣ ಮಠ ವಡಾಲಾ ಇದರ ಕಾರ್ಯಾಧ್ಯಕ್ಷ ಜಿ.ಎಸ್ ಭಟ್, ಗೌ| ಕೋಶಾಧಿಕಾರಿ ಶಾಂತರಾಮ ಎಸ್.ಭಟ್, ಕಾರ್ಯದರ್ಶಿ ಉಲ್ಲಾಸ್ ಡಿ.ಕಾಮತ್, ರಾಜನ್ ಭಟ್, ಕಮಾಲಾಕ್ಷ ಸರಾಫ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.