ಕುಂಭಾಸಿ: ಶ್ರೀ ಪುರಂದರ ದಾಸರ ಆರಾಧನೆ
ಕುಂದಾಪುರ: ದೇವರಿಗೆ ಪ್ರಿಯರಾದವರ, ಅನುಗ್ರಹಕ್ಕೆ ಪಾತ್ರರಾದವರ ಸ್ಮರಣೆ, ಆರಾಧನೆ ಮಾಡುವುದರಿಂದ ನಮಗೂ ದೈವ ಕೃಪೆಯಾಗುತ್ತದೆ. ಅಂತಹವರ ಆದರ್ಶಗಳ ಚಿಂತನೆಗಳಿಂದ ನಮಗೆ ಸನ್ಮಾರ್ಗದ ಪ್ರೇರಣೆ ಸಿಗುತ್ತದೆ. ದಾಸ ಶ್ರೇಷ್ಠ, ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಕೃತಿಗಳ ಅಧ್ಯಯನ, ಗಾಯನಗಳಿಂದ ಮಾನವ ಜೀವನದ ಮೌಲ್ಯಗಳ ಅರಿವಾಗುತ್ತದೆ ಎಂದು ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಹೇಳಿದರು.
ಕುಂಭಾಸಿಯ ಶ್ರೀ ಸಂಕೀರ್ತನ ಸಂಗೀತ ಶಾಲೆಯ 13ನೇ ವಾರ್ಷಿಕೋತ್ಸವ ಮತ್ತು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯನಗರ ಅರಸರ ಕಾಲದ ಶಾಸನವೊಂದರ ಮಾಹಿತಿಯಂತೆ ದಾಸರು ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ ಕೃತಿಗಳನ್ನು ರಚಿಸಿದ್ದರು. ತನ್ನ ದುಃಖ, ಸಂತೋಷ, ಅನಿಭವಗಳನ್ನೆ ಕೀರ್ತನೆಗಳಾ ಮೂಲಕ ಹಾಡಿ ದೇವರಿಗೆ ಒಪ್ಪಿಸಿದರು. ಪುತ್ರ ಅಸುನೀಗಿದಾಗ ‘ಗಿಳಿಯು ಪಂಜರದೊಳಿಲ್ಲ’ ಕೃತಿ ರಚಿಸಿದರೆ, ಹರಿ ಸರ್ವೋತ್ತಮ ತತ್ವವನ್ನು ‘ಈ ಪರಿಯ ಸೊಬಗಾವ’ ಕೃತಿಯಲ್ಲಿ ಸರಳವಾಗಿ ತೆರೆದಿಟ್ಟರು. ಅವರ ‘ಡೊಂಕು ಬಾಲದ ನಾಯಕರೆ’ ಕೃತಿಯಲ್ಲಿ ನಾಯಿ ಪ್ರತಿಮೆ ಮಾತ್ರ. ಹೀಗೆ ಪುರಂದರ ದಾಸರು ತಮ್ಮ ಕೃತಿಗಳ ಮೂಲಕ ಸಾರ್ವಕಾಲಿಕ ಸತ್ಯವನ್ನು ಸಾರಿದ್ದಾರೆ ಎಂದು ಉಪಾಧ್ಯಾಯರು ದಾಸರ ಜೀವನಗಾಥೆಯನ್ನು ವರ್ಣಿಸಿದರು.
ಮಂಡ್ಯದಲ್ಲಿ ನಡೆದ ವಲಯಮಟ್ಟ ಹಾಗೂ ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಭಕ್ತಿಗೀತೆ ಸ್ಪರ್ಧೆಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಂಕೀರ್ತನ ಸಂಗೀತ ಶಾಲೆಯ ವಿದ್ಯಾರ್ಥಿನಿ, ಕೋಟ ಪ್ರಭಾಕರ ಮಧ್ಯಸ್ಥ ಮತ್ತು ಪ್ರಭಾವತಿ ಮಧ್ಯಸ್ಥ ದಂಪತಿಯ ಪುತ್ರಿ ಪ್ರತೀಕ್ಷಾ ಮಧ್ಯಸ್ಥರನ್ನು ಸಂಗೀತ ಶಾಲೆಯ ವತಿಯಿಂಡ ಸನ್ಮಾನಿಸಲಾಯಿತು. ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರನ್ನು ಗೌರವಿಸಲಾಯಿತು.
ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀಧರ ಉಪಾಧ್ಯಾಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಕೆ.ಜಿ.ವೈದ್ಯ ಕಾರ್ಯಕ್ರಮ ನಿರೂಪಿಸಿ, ಸಂಗೀತ ಶಾಲೆಯ ಪ್ರಾಂಶುಪಾಲೆ ವಿದುಷಿ ಜಯಂತಿ ಉಪಾಧ್ಯಾಯ ವಂದಿಸಿದರು.
ನಂತರ ಸಂಕೀರ್ತನ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಸಂಗಿತಾರಾಧನೆ, ವಸಂತಾರಾಧನೆ ನಡೆಯಿತು. ಪಕ್ಕ ವಾದ್ಯಗಳಲ್ಲಿ ಶರ್ಮಿಳಾ ಉಡುಪಿ ಪಿಟೀಲು ಹಾಗೂ ಬಾಲಚಂದ್ರ ಆಚಾರ್ಯ ತಬಲಾದಲ್ಲಿ ಸಹಕರಿಸಿದರು.