"ರೋಟರಿ ಕುಂದಾಪುರ ದಕ್ಷಿಣ" ಏರ್ಪಡಿಸಿದ "ಕಪ್ಪು ಹಣದ ಸುತ್ತ ಮುತ್ತ" ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ "ಕಪ್ಪು ಹಣ ಸೃಷ್ಠಿಯ ಹಿಂದಿನ ಕಾರಣಗಳನ್ನು ವಿವರಿಸಿದರು.
ಬ್ರಿಟಿಷರು ಆಡಳಿತ ನಡೆಸುವಾಗ ಗರಿಷ್ಠ ಶೇ 25 ತೆರಿಗೆ ಇತ್ತು. ಅವರು ಭಾರತಕ್ಕೆ ಸ್ವಾತಂತ್ರ್ಯ ನೀಡುವ ಮುನ್ನ ಅದನ್ನು ಶೇ 63ಕ್ಕೆ ಏರಿಸಿದರು. ಅದರ ಕಾರಣ. ಆದಷ್ಟು ಹೆಚ್ಚು ಹಣ ಪಡೆದುಕೊಳ್ಳುವುದು ಅಥವಾ ಇಲ್ಲಿಯ ಕೈಗಾರಿಕೋದ್ಯಮದ ಅಭಿವೃದ್ಧಿಗೆ ತಡೆ ಒಡ್ಡುವುದು" ಆದರೆ ಭಾರತದಲ್ಲಿ ನಮ್ಮದೇ ನೂತನ ಸಹಕಾರ ರಚನೆಗೊಂಡಾಗ ಇದೇ ಕರಮಟ್ಟವನ್ನು ಶೇ 79 ರಿಂದ 94ಕ್ಕೆ ಕೊಂಡೊಯ್ದರು. ಉದ್ಯಮ , ವ್ಯವಹಾರ ನಡೆಸುವುದಾದರೂ ಹೇಗೆ, ತನಗಾಗಿ ಏನಾದರೂ ಉಳಿಸಿಕೊಳ್ಳುವು ದಾದರೂ ಹೇಗೆ? ಹಾಗಾಗಿ ಸರಕಾರಕ್ಕೆ ತಪ್ಪು ಲೆಕ್ಕ ನೀಡಿ ನಿಶ್ಚಿತವಾದ ಕರಕಟ್ಟುವುದನ್ನು ತಪ್ಪಿಸಿಕೊಳ್ಳುವ ಮನೋಭಾವ ಸಹಜವಾಗಿ ಉದ್ಭವವಾಯಿತು. ಜನರ ಮೇಲೆ ತೆರಿಗೆ ಹೊರೆಯಿಂದ ಅರ್ಥ ವ್ಯವಸ್ಥೆಯಲ್ಲಿ ಆಗಿರುವ ಪ್ರಮಾದದ ಅರಿವು ಆಗಬೇಕಾದರೆ ಸರಕಾರಕಕೆ 15 ವರ್ಷಗಳೇ ಬೇಕಾಯಿತು.
ಆನಂತರವೂ ಈ ತೆರಿಗೆ ಕ್ರಮದಿಂದಾದ ಅವ್ಯವಸ್ಥೆ ಸರಿಪಡಿಸುತ್ತ ಬರಲು ಹಲವು ಸರಕಾರಗಳು ಬರಬೇಕಾಯಿತು ಎಂದು ಹೇಳಿದ ಎಂ.ಗಣೇಶ ಶೆಟ್ಟಿಯವರು , ಇಂದೂ ಸಹ ಕರ ಪದ್ಧತಿ ನ್ಯಾಯಯುತವಾಗಿಲ್ಲ. ಕಂಪೆನಿಗಳಿಗೆ ಇರುವ ಅನುಕೂಲತೆ. ವಯಕ್ತಿಕವಾಗಿ ವ್ಯವಹಾರ ನಡೆಸುವವರಿಗಿಲ್ಲ. ಆದಾಯ ತೆರಿಗೆ ಇಲಾಖೆಯವರೂ ಆದಾಯ ಕಟ್ಟುತ್ತಿದ್ದವರ ಮೇಲೆ ಒತ್ತಡದ ಕ್ರಮ ಕೈಗೊಳ್ಳುತ್ತಿದ್ದಾರೆ ವಿನಹ ಸಾಕಷ್ಟು ಸಂಪಾದನೆ ವಿವಿಧ ಭಾಗಗಳಿಂದ ಕ್ರೋಢಿಕರಿಸುತ್ತಿರುವ ಜನರತ್ತ ಗಮನವೇ ಹರಿಸುತ್ತಿಲ್ಲ. ಕರಕಟ್ಟುವವರು ಸಂಕಟ ಪಡುತ್ತಿದ್ದರೆ, ಕಟ್ಟದವರು ಸಂತೃಪ್ತಿಯಲ್ಲಿದ್ದಾರೆ ಎಂದರು.
ಭಾರತಕ್ಕೆ ಸಮಾಧಾನಕರ ಫಲಿತಾಂಶ :
"ಕಪ್ಪು ಹಣ" ಜಾಗತಿಕ ಪಟ್ಟಿಯಲ್ಲಿ ಭಾರತಕ್ಕಿಂತ 60ಕ್ಕೂ ಹೆಚ್ಚು ರಾಷ್ಟ್ರಗಳು ಮುಂದಿರುವುದರಿಂದ ಈ ವಿಷಯದಲ್ಲಿ ಸಮಾಧಾನಕರ ಫಲಿತಾಂಶ ಪಡೆದಿರುವುದು ಖುಶಿಯೆನಿಸುತ್ತಿದೆ. ಆದರೆ ಡೆನ್ಮಾರ್ಕ್ , ಸ್ವೀಡನ್ ಮುಂತಾದ ಕಪ್ಪು ಹಣವೇ ಇಲ್ಲದ, ನಾಗರಿಕರ , ನಿರುದ್ಯೋಗಿಗಳ ಸುರಕ್ಷತೆಯನ್ನು ತಾವೇ ನೋಡಿಕೊಳ್ಳುವ ದೇಶಗಳಿಗೆ ಹೋಲಿಸಿದರೆ ಭಾರತ ಸುಧಾರಿಸಬೇಕಾದುದು ಬಹಳಷ್ಟಿದೆ. ನಮ್ಮಲ್ಲಿ ಕೆಲವರು ಯಾವುದಕ್ಕೂ ಉಪಯೋಗಿಸದೇ ಕೋಟಿ ಕೋಟಿ ಕೂಡಿ ಹಾಕುತ್ತಾರೆ. ರಾಜಕೀಯ ಭ್ರಷ್ಟರು ಅಟ್ಟಹಾಸಗೈಯುತ್ತಾರೆ. ಇನ್ನೊಂದೆಡೆ ಕುಟುಂಬ ನಿರ್ವಹಣೆಗೆ ಸಂಬಳ ಸಾಲದೇ ಜನರಿಂದ ಹಣಪಡೆದ ನೌಕರರು "ಲಂಚಪಡೆದ" ಎಂದು ಶಿಕ್ಷೆಗೊಳಗಾಗುತ್ತಾರೆ. ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ನಾಗರಿಕರಿಗೆ ಜೀವನ ಭದ್ರತೆಯಿಂದ ಸಮಾಜ ಸುಧಾರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಓಝಲಿನ್ ರೆಬೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ಕೆ.ಕೆ.ಕಾಂಚನ್ ಅತಿಥಿಯನ್ನು ಪರಿಚಯಿಸಿದರು. ಕಾರ್ಯದರ್ಶಿ ಫ್ಲೈವಿನ್ ವಂದಿಸಿದರು.