ಬ್ರಾಹ್ಮಣರು ಆತ್ಮಗೌರವ ಹೊಂದಬೇಕು- ವಿದ್ವಾನ್ ಮಾಧವ ಅಡಿಗ
ಕುಂದಾಪುರ: ಬ್ರಾಹ್ಮಣರಿಗೆ ತಾನು ಬ್ರಾಹ್ಮಣ ಎಂದು ಹೇಳಿಕೊಳ್ಳಲು ಹಿಂಜರಿಕೆ ಬೇಡ. ಆದರೆ ಹುಟ್ಟಿನಿಂದ ಮಾತ್ರ ಬ್ರಾಹ್ಮಣನಾಗದೆ ಆಚರಣೆ, ಅನುಷ್ಠಾನಗಳಿಂದಲೂ ಬ್ರಾಹ್ಮಣನಾಗಬೇಕು. ಇಂದಿಗೂ ಬ್ರಾಹ್ಮಣರ ಬಗ್ಗೆ ಇತರರಿಗೆ ಗೌರವ ಇದೆ. ಆದರೆ ನಮಗೇ ಹೆಮ್ಮೆ ಇಲ್ಲ. ಈ ಕಾರಣದಿಂದಲೇ ಇಂದು ಬ್ರಾಹ್ಮಣರು ಅವಹೇಳನಕ್ಕೆ ಗುರಿಯಾಗಿರುವುದು. ಗಾಯತ್ರಿ ಮಹಾಮಂತ್ರವನ್ನು ಕೊಟ್ಟ ವಿಶ್ವಾಮಿತ್ರ ಹುಟ್ಟಿನಿಂದ ಬ್ರಾಹ್ಮಣನಲ್ಲ. ಅನುಷ್ಠಾನ, ವೇದಾಧ್ಯಯನಗಳ್ಂದ ಬ್ರಾಹ್ಮಣತ್ವ ಪಡೆಯಬಹುದು. ಬ್ರಾಹ್ಮಣ ಸಂಘಟನೆ ಸ್ವಾವಲಂಬನೆ ಮತ್ತು ಸಂಸ್ಕೃತಿ ರಕ್ಷಣೆಗಾಗಿಯೇ ಹೊರತು ಪರಪೀಡೆಗಲ್ಲ ಎಂದು ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್ ಮಾಧವ ಅಡಿಗ ಹೇಳಿದರು.
ಕೋಟೇಶ್ವರದ ಶ್ರೀ ಕೋದಂಡರಾಮ ಮಂದಿರದಲ್ಲಿ ಜರಗಿದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತನ ಕೋಟೇಶ್ವರ ವಲಯದ ವಾರ್ಷಿಕ ಅಧಿವೇಶನದ ಮುಖ್ಯ ಅಬ್ಯಾಗತರಾಗಿ ಅವರು ಮಾತನಾಡಿದರು.
ತಾಲೂಕು ಪರಿಷತ್ನ ಅಧ್ಯಕ್ಷ ಟಿ.ಕೆ. ಮಹಾಬಲೇಶ್ವರ ಭಾಟ ಮಾತನಾಡಿ, ಪರಿಷತ್ನ ಪ್ರತಿವಲಯದಲ್ಲೂ ಸಂಸ್ಕ್ರತ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು ಎಂದರು. ಉಡುಪಿ ಜಿಲ್ಲಾ ಬ್ರಾಹಣ ಮಾಹಾಸಭಾದ ಕಾರ್ಯದರ್ಶಿ ಕೆ. ಗಣೇಶ ರಾವ್ ಮಾತನಾಡಿ, ವಿಪ್ರ ಮಹಿಳೆಯರು, ಪುರುಷರು ಒಳಗೊಂಡ ನೂತನ ಚೆಂಡೆ ವಾದನ ಬಳಗ ಅಸ್ತಿತ್ವಕ್ಕೆ ಬಂದಿರುವುದಾಗಿ ಘೋಷಿಸಿದರು.
ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಮಚಂದ್ರ ಹತ್ವಾರ್ ಬೀಜಾಡಿ ಮತ್ತು ಅರ್ಚಕ ನಾಗರಾಜ ಅಡಿಗರನ್ನು ಸನ್ಮಾನಿಸಲಾಯಿತು. ಸಮ್ನಾನಿತರ ಪರವಾಗಿ ರಾಮಚಂದ್ರ ಹತ್ವಾರ್ ಮಾತನಾಡಿದರು ಶ್ರೀ ಕೋದಂಡರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ದೊಡ್ಮನೆ ನಾಗೇಂದ್ರ ಭಟ್, ಉದ್ಯಮಿಗಳಾದ ಎನ್.ರಾಘವೇಂದ್ರ ರಾವ್, ಜಿ. ಶ್ರೀನಿವಾಸ ರಾವ್, ಪ್ರರಿಷತ್ ಪೂರ್ವಾಧ್ಯಕ್ಷ ಕೆ. ಶ್ರೀನಿವಾಸ ಹೆಬ್ಬಾರ್, ಕೃಷ್ಣದೇವ ಕಾರಂತ ಕೋಣಿ, ವಿವಿಧ ವಲಯ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ವಲಯ ಗೌರವಾಧ್ಯಕ್ಷ ಬಿ. ವಾದಿರಾಜ ಅಡಿಗ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗನ್ನಾಡಿದರು. ವಲಯಾಧ್ಯಕ್ಷ ಎಚ್. ಶ್ರೀನಿವಾಸ ಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಗರಾಜ ಅಡಿಗ ವರದಿ ವಾಚಿಸಿದರು. ಖಜಾಂಚಿ ವಾಸುದೇವ ರಾವ್ ಆಯ-ವ್ಯಯ ವಿವರ ನೀಡಿದರು. ನೂತನ ಸದಸ್ಯರನ್ನು ಗೌರವಿಸಲಾಯಿತು. ಗೌರವ ಸಲಹೆಗಾರ ವೈ.ಎನ್. ವೆಂಕಟೇಶ ಮೂರ್ತಿ ಭಟ್ ಮತ್ತು ವಿಮಲ ಭಟ್ ಕಾರ್ಯಕ್ರಮ ನಿರೂಪಿಸಿ, ಮಹಿಳಾ ವೇದಿಕೆ ಕಾರ್ಯದರ್ಶಿ ವಸಂತಿ ಮಿತ್ಯಂತ ವಂದಿಸಿದರು.