ಸ್ವರ್ಗದಲ್ಲಿ ಒಂದಷ್ಟು ಜನ ಸಂತೋಷದಿಂದ್ದಿದ್ದರು. ಇತ್ತ ಕಡೆ ನರಕದಲ್ಲಿ ಒಂದಷ್ಟು ಜನ ಮತ್ತೂ ಸಂತೋಷದಲ್ಲಿದ್ದರು. ಯಮನಿಗೆ ಆಶ್ಚರ್ಯವಾಗಿ ಚಿತ್ರಗುಪ್ತನಲ್ಲಿ ಕೇಳಿದ, ಏನಿದು ವಿಚಾರ. ಚಿತ್ರಗುಪ್ತ ಹೇಳಿದ, ಏನಿಲ್ಲ ಪ್ರಭು-ಅವರು ಉಡುಪಿಯವರು, ಎಲ್ಲಿದ್ದರೂ ಸಂತೋಷದಿಂದ ಇರುವವರು !.``
-
ಇಂದು ಎಲ್ಲಿ ನೋಡಿದರೂ ಸ್ತ್ರೀಶಕ್ತಿ, ಅವರ ಮುಂದೆ ಗಂಡಸರು ಬಲಕುಗ್ಗಿ ನಿಶ್ಯಕ್ತಿ.
-
ಹಾಸ್ಯ ಚಟಾಕಿಯ ಮೂಲಕ ನಗೆಕಡಲಲ್ಲಿ ತೇಲಿಸಿದವರು ಉಡುಪಿಯ ಸಂಧ್ಯಾ ಶೆಣೈ ಅವರು.
ಪ್ರತಿಯೊಂದು ಹಂತದಲ್ಲೂ ಸಂತೋಷ, ದುಖಃ ಇರುತ್ತದೆ. ಆದರೆ ಹಾಸ್ಯವನ್ನು ಅನುಭವಿಸಲು ಮನಸ್ಸು ಬೇಕು, ಪ್ರತಿಯೊಂದು ಕ್ಷಣವನ್ನೂ ಆನಂದಿಸಬೇಕು. ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಹಾಸ್ಯ ಅನಿವಾರ್ಯ ಎಂದು ಸಂಧ್ಯಾ ಶೆಣೈ ಹೇಳಿದರು.
ಅವರು ಬಾರಕೂರು ರೋಟರಿ ಕ್ಲಬ್ ಆಶ್ರಯದಲ್ಲಿ ವೃತ್ತಿ ಮಾಸಾಚರಣೆ ಮತ್ತು ಹಾಸ್ಯ ಚಟಾಕಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೀತಿಯ ಕೊರತೆಯಿಂದ ಹೃದಯದ ಭಾಷೆ ಮರೆತಿದ್ದೇವೆ. ಸಮಾಜದಲ್ಲಿ ಯಾರೂ ದೊಡ್ಡವರೆಂದಿಲ್ಲ. ಸ್ಥಾನಮಾನಗಳಿಗಿಂತ ಮುಖ್ಯವಾಗಿ ಮಾನವೀಯ ಗುಣಗಳನ್ನು ಕಲಿಯೋಣ ಎಂದರು. ಇಂದು ನಾವು ಮಕ್ಕಳಿಗೋಸ್ಕರ ಪ್ರತಿಯೊಂದು ಹಂತದಲ್ಲೂ ಸಂಕಷ್ಟವನ್ನೇ ಎದುರಿಸಿ ಜೀವನವನ್ನು ಸವೆಸುತ್ತೇವೆ. ಮಕ್ಕಳಿಗೂ ಜೀವನ ಸಂಘರ್ಷ ತಿಳಿಯಲಿ. ಅವರಿಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ತಿಳಿಸಿ ಸತ್ಪ್ರಜೆಯನ್ನಾಗಿ ಮಾಡಿ ಎಂದರು.
ಸಮಾರಂಭದಲ್ಲಿ ಪಂಚಾಯತ್ ಅಭಿವೃದ್ದಿ ಅಕಾರಿ ಅರುಂಧತಿ ಏಸುಮನೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸುರೇಶ್ ಶೆಟ್ಟಿ, ಬಾರಕೂರು ಪರಿಸರದ ದಿನಪತ್ರಿಕೆ ವಿತರಕರಾದ ರಾಘವೇಂದ್ರ ಶಾಸ್ತ್ರಿ, ಪ್ರಗತಿಪರ ಕೃಷಿಕ ಅಜೇತಾ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ದಿನೇಶ್ ಹೆಗ್ಡೆ ಆತ್ರಾಡಿ, ರೋಟರಿಯ ವಾಸುದೇವ ಶೆಟ್ಟಿ, ಗಂಗಾಧರ ಜೋಶಿ, ಉಮೇಶ್ ಆಚಾರ್ಯ, ವಸಂತ್, ಪ್ರಕಾಶ್ ತಂತ್ರಿ, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಪ್ರಫುಲ್ಲಾ ಆರ್. ಶೆಟ್ಟಿ, ಕಾರ್ಯದಶಿ೯ ಜಯಶ್ರೀ ಆರ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಾರಕೂರು ರೋಟರಿ ಅಧ್ಯಕ್ಷ ಸತೀಶ್ ಎಸ್. ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಾಪಕ ಆನಂದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದಶಿ೯ ಪ್ರಕಾಶ್ ಆಚಾರ್ಯ ವಂದಿಸಿದರು.