ಸ್ಥಾನೀಯ ನೂತನ ಯುವ ನಗರ ಸೇವಕ ಹರ್ಷ್ ಭಾಗರ್ವ ಪಟೇಲ್ ಭೇಟಿ
ಮುಂಬಯಿ, ಮಾ.09: ಬಿಲ್ಲವ ಅಸೋಸಿಯೇಶನ್ ಮುಂಬಯಿ ಗೋರೆಗಾಂವ್ ಸ್ಥಳೀಯ ಕಚೇರಿಯಲ್ಲಿ ಕಳೆದ ಗುರುವಾರ ಸಂಜೆ ಜರಗಿಸಲ್ಪಟ್ಟ ಗುರುಪೂಜೆ ಸಂದರ್ಭದಲ್ಲಿ ಬೃಹನ್ಮುಂಬಯಿ ನಗರಪಾಲಿಗೆ ನೂತನವಾಗಿ ಚುನಾಯಿಸಲ್ಪಟ್ಟ ಸ್ಥಳೀಯ ವಾರ್ಡ್ ನಂ.55ರ ಕಾಪೆರ್Çರೇಟರ್ ಹರ್ಷ್ ಭಾರ್ಗವ ಪಟೇಲ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಹರ್ಷ್ ಅವರು ಗುರು ಸನ್ನಿಧಿಗೆ ಭೇಟಿ ನೀಡಿ ಗುರುಪೂಜೆಯಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ನಂತರ ಸಂಘದ ಗೌರವ ಸ್ವೀಕರಿಸಿದರು.
ಅಸೋಸಿಯೇಶನ್ನ ಗೋರೆಗಾಂವ್ ಸ್ಥಳೀಯ ಗೌರವಾಧ್ಯಕ್ಷ ಜಗನ್ನಾಥ್ ವಿ.ಕೋಟ್ಯಾನ್ ಅವರು ಹರ್ಷ್ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದರು.ಕಾರ್ಯಾಧ್ಯಕ್ಷ ಸಚ್ಚೇಂದ್ರ ಕೆ.ಕೋಟ್ಯಾನ್ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನೂ ಗೌ| ಕಾರ್ಯದರ್ಶಿ ಶಶಿಧರ್ ಬಂಗೇರ ಗಣಪತಿ ವಿಗ್ರಹವನ್ನೂ ಮತ್ತು ಕೋಶಾಧಿಕಾರಿ ಮೋಹನ್ ಅಮೀನ್ ಸ್ಮರಣ ಕಾಣಿಕೆ ನೀಡಿ ಗೌರವಿಸಿದರು.
ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಸ್ವಾಭಿಮಾನಿಯಾಗಿ ಬದುಕಲು ಭದ್ರ ಬುನಾದಿ ಹಾಕಿ ಕೊಟ್ಟ ಬ್ರಹ್ಮಶ್ರೀ ನಾರಾಯಣ ಸ್ವಾಮಿ ಓರ್ವ ಮಹಾನ್ ದಾರ್ಶನಿಕ ಮತ್ತು ಸಮಾಜ ಸುಧಾರಕ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶ ಮೂಲಕ ಸಮಾನತೆಯನ್ನು ಲೋಕಕ್ಕೆ ಸಾರಿದ ಗುರುಗಳ ತತ್ವಗಳನ್ನು ಪದಾಧಿಕಾರಿಗಳು ಹರ್ಷ್ಗೆ ಮನವರಿಸಿ ಶುಭಾರೈಸಿದರು.
ತನಗೆ ನೀಡಿದ ಗೌರವಕ್ಕೆ ಉತ್ತರವಾಗಿ ಮಾತನಾಡಿದ ಹರ್ಷ್, ತಾನು ಚುನಾವಣಿಗೆ ಮೊದಲು ಗುರು ಸನ್ನಿದಿಗೆ ಬಂದು ಆಶೀರ್ವಾದವನ್ನು ಪಡೆದು ಈಗ ಚುನಾಯಿತನಾದ ಮೇಲೆ ಪುನಃ ಅವರ ಸನ್ನಿದಿಗೆ ಬಂದಿದ್ದೇನೆ. ನನ್ನ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ಅವರ ವಿಚಾರ ಧಾರೆಯಂತೆ ಮತಭೇದ ಇಲ್ಲದೆ ಕ್ಷೇತ್ರದ ಎಲ್ಲಾ ಜನರ ಹಿತದೃಷ್ಟಿಯಲ್ಲಿ ದುಡಿಯುತ್ತೇನೆ ಎಂದು ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ ಸ್ಥಳೀಯ ಸಮಿತಿಯ ಸದಸ್ಯರಾದ ಡಿ.ಎ ಪೂಜಾರಿ, ವಿಠ್ಠಲ್ ಪೂಜಾರಿ, ಎಲ್.ಆರ್.ಅಂಚನ್, ಪದ್ಮಾವತಿ ಪೂಜಾರಿ, ಶಿವರಾಯ ಕುಂದರ್, ಸುರೇಶ್ ಪೂಜಾರಿ, ಪುಷ್ಪ ಅಮೀನ್, ಪುಷ್ಪ ಸುವರ್ಣ, ಭಾಸ್ಕರ್ ಕೋಟ್ಯಾನ್, ಬಿಜೆಪಿ ಕಾರ್ಯಕರ್ತ ಸುರೇಶ್ ಆರ್.ಅಂಚನ್, ಆನಂದ್ ಐಲ್, ಸಮೀರ್ ದೇಸಾಯಿ, ಪ್ರದೀಪ್ ಭಟ್ ಮೊದಲಾದವರು ಉಪಸ್ಥಿತರಿದ್ದರು.