ಮಂಗಳೂರು: ಬಿಪಿಎಲ್ ಪಡಿತರ ಚೀಟಿಗೆ ನಿಗದಿಪಡಿಸಿರುವ 4 ಮಾನದಂಡಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ದೃಢಪತ್ರಗಳನ್ನು ನೀಡುವ ಬದಲು ಅರ್ಜಿದಾರರೇ ಸ್ವಯಂಘೋಷಣೆ ಮಾಡಿದರೆ ಸಾಕು ಎಂಬುದಾಗಿ ಸರಕಾರ ರೂಪಿಸಿರುವ ನಿಯಮ ಎ. 1ರಿಂದಲೇ ಜಾರಿಗೆ ಬಂದಿದ್ದು ಇತರ ದೃಢಪತ್ರಗಳನ್ನು ಪಡೆಯುವ ಅಗತ್ಯವಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಗ್ರಾ.ಪಂ.ಗಳು, ನಗರಾಡಳಿತ ಸಂಸ್ಥೆಗಳಲ್ಲಿ ಅರ್ಜಿದಾರರಿಂದ ದೃಢಪತ್ರಗಳನ್ನು ಕೇಳುತ್ತಿರುವುದಾಗಿ ದೂರುಗಳು ಬಂದಿವೆ. ಅಧಿಕಾರಿಗಳು ಸ್ವಯಂಘೋಷಣೆ ಅಧಾರದಲ್ಲೇ ಅವರಿಗೆ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಬೇಕು ಎಂದು ಸಚಿವರು ತಿಳಿಸಿದರು.ಅರ್ಜಿದಾರರು ಸರಕಾರ ನಿಗದಿಪಡಿಸಿರುವ ಮಾನದಂಡಗಳಂತೆ ಸ್ವಯಂಘೋಷಣೆ ಮಾಡಿರುತ್ತಾರೆ. ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂ. ಒಳಗಡೆ ಇರುವ ಕುರಿತು ಕಂದಾಯ ಇಲಾಖೆ ನೀಡುತ್ತಿರುವ ಆದಾಯ ದೃಢೀಕರಣ ಪತ್ರದ ಆಧಾರದಲ್ಲಿ ನಿರ್ಧರಿಸಲಾಗುವುದು.
ಅರ್ಜಿದಾರರು ಆಹಾರ ಇಲಾಖೆಗೆ ಸಲ್ಲಿಸಿರುವ ಮಾಹಿತಿಯ ಆಧಾರದ ಮೇಲೆ ಆದಾಯ ಪ್ರಮಾಣಪತ್ರವನ್ನು ತಂತ್ರಾಂಶದ ಮೂಲಕ ಕಂದಾಯ ಇಲಾಖೆಯಿಂದ ಪಡೆದುಕೊಳ್ಳಲಾಗುವುದು. ಅದಕ್ಕಾಗಿ ಅರ್ಜಿದಾರರು ಪ್ರತ್ಯೇಕ ವಿವರ ಸಲ್ಲಿಸುವ ಅಗತ್ಯವೂ ಇರುವುದಿಲ್ಲ. ಕಂದಾಯ ಇಲಾಖೆಯಿಂದ ಆದಾಯ ಪ್ರಮಾಣಪತ್ರ ನೀಡುವಾಗ ಅರ್ಜಿದಾರರ ಕುಟುಂಬದ ವಿಳಾಸ ಹಾಗೂ ಕುಟುಂಬದ ಮುಖ್ಯಸ್ಥರೊಂದಿಗೆ ಕುಟುಂಬದ ಇತರ ಸದಸ್ಯರ ಸಂಬಂಧವೂ ಕೂಡ ದೃಢೀಕರಣಗೊಳ್ಳುವುದು ಎಂದು ಅವರು ಮಾಹಿತಿ ನೀಡಿದರು.