ಮಂಗಳೂರು: ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಕ್ರೋಡೀರಿಸಲು 1 ತಿಂಗಳೊಳಗೆ ಸಮಾಲೋಚನ ಸಭೆ ಆಯೋಜಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸುಮಾರು 1.52 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 1ರಿಂದ 2 ಮತ್ತು 3ನೇ ಪ್ಲಾಟ್ಫಾರಂ ಅನ್ನು ಸಂಪರ್ಕಿಸುವ ನಾಲ್ಕನೇ ಹೊಸ ಪ್ಲಾಟ್ಫಾರಂ ರಚನೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಹೊಸ ಪ್ಲಾಟ್ಫಾರಂ ಕಾಮಗಾರಿ ಶೀಘ್ರದಲ್ಲಿ ನಡೆದು ಪ್ರಯಾಣಿಕರಿಗೆ ಅರ್ಪಿಸಲಾಗುವುದು ಎಂದವರು ತಿಳಿಸಿದರು.ಮಂಗಳೂರಿನ ರೈಲ್ವೇ ಯೋಜನೆ ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿ ರೈಲ್ವೇ ಅಧಿಕಾರಿಗಳೊಂದಿಗೆ ನಿರಂತರ ಚರ್ಚೆ, ಸಭೆಗಳನ್ನು ನಡೆಸಲಾಗುತ್ತಿದೆ. ಇದರಿಂದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರೈಸಲು ಸಾಧ್ಯವಾಗುತ್ತಿದೆ. ಈ ನಿಲ್ದಾಣವನ್ನು ವಿಶ್ವಮಟ್ಟಕ್ಕೇರಿಸುವ ನೆಲೆಯಲ್ಲಿ ಪೂರಕ ಕಾರ್ಯಗಳನ್ನು ಶೀಘ್ರದಲ್ಲಿ ಅನುಷ್ಠಾನಿಸಲಾಗುವುದು ಎಂದರು.