ಮಂಗಳೂರು: ಮಂಗಳೂರು ಕಾರ್ಮಿಕರಿಗೆ ಮೇ 1 ರ ಕಾರ್ಮಿಕರ ದಿನದಂದು ಒಂದೊಳ್ಳೆ ಉಡುಗೊರೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹೌದು. ಕರಾವಳಿಗೊಂದು ಕಾರ್ಮಿಕರ ಭವನ ನಿರ್ಮಿಸಬೇಕೆಂಬ ಅನೇಕ ವರ್ಷಗಳಿಂದ ಕೇಳಿ ಬರುತ್ತಿದ್ದ ಕೂಗಿಗೆ ಕೊನೆಗೂ ರಾಜ್ಯ ಸರ್ಕಾರ ಕಿವಿಗೊಟ್ಟಿದೆ.
ಕಾರ್ಮಿಕ ಭವನ ನಿರ್ಮಿಸೋಕೇ ಆದೇಶ ನೀಡುವುದರ ಜತೆಗೆ 2.50 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಜಿಲ್ಲಾ ಕಾರ್ಮಿಕ ಕಲ್ಯಾಣ ಇಲಾಖೆಗೆ ಸ್ವಂತ ಕಟ್ಟಡವಿಲ್ಲದೆ 1 ಲಕ್ಷ ಬಾಡಿಗೆ ಕೊಟ್ಟು ಈ ಕಚೇರಿ ಕಾರ್ಯನಿರ್ವಹಿಸುತ್ತಿದೆ.
ಈ ಕುರಿತು ಮಾತನಾಡಿದ ಮುಖ್ಯ ಸಚೇತಕ ಐವನ್ ಡಿಸೋಜಾ, 'ಮಂಗಳೂರಿನ ಕದ್ರಿಯಲ್ಲಿ ಕಾರ್ಮಿಕರ ಭವನ ನಿರ್ಮಾಣವಾಗಲಿದೆ. ಮೇ 1ರಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದು ರಾಜ್ಯದ ಏಳನೇ ಭವನವಾಗಲಿದೆ' ಎಂದರು