ಮಂಗಳೂರು: ಜಿಲ್ಲೆಯಲ್ಲಿ ನಿವೇಶನ ರಹಿತರ ಪಟ್ಟಿ ತಯಾರಿಸಿ,ಅವರಿಂದ ಅರ್ಜಿ ಸ್ವೀಕರಿಸಿ, ಸ್ಥಳ ಲಭ್ಯ ಇರುವಲ್ಲಿ ನಿವೇಶನ ಒದಗಿಸಲು ವ್ಯವಸ್ಥೆ ಕಲ್ಪಿಸುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ ೯೪ ಎ ಕಲಂನಡಿ ೧,೧೧,೧೫೦ ಅರ್ಜಿ ವಿಲೇವಾರಿಯಾಗಿದ್ದು, ೨,೫೮೦ ಅರ್ಜಿಗಳು ಇನ್ನೂ ಬಾಕಿ ಇದೆ. ೯೪ ಬಿ ಅಡಿಯಲ್ಲಿ ೨೮,೯೭೦ ಅರ್ಜಿ ವಿಲೇವಾರಿಯಾಗಿದ್ದು, ೧೯,೮೪೩ ಅರ್ಜಿ ಬಾಕಿ ಇರುವುದಾಗಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದಿದ್ದಾರೆ.
ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡೂ, ೯೪ ಸಿ ಅಡಿಯಲ್ಲಿ ಅರ್ಜಿ ಹಾಕಿರುವುದನ್ನು ಗ್ರಾಮ ಲೆಕ್ಕಿಗರು ಹಾಗೂ ಪಿಡಿಒ ಗಳು ಜಂಟಿಯಾಗಿ ಪರಿಶೀಲನೆ ಮಾಡಬೇಕು ಎಂದು ಸಚಿವರು ಸೂಚಿಸಿದರು. ಪ್ರಸ್ತುತ ಜಿಲ್ಲೆಯಲ್ಲಿ ೭೭,೬೮೨ ಅರ್ಜಿ ೯೪ ಸಿ ಅಡಿಯಲ್ಲಿ ಸ್ವೀಕರಿಸಲಾಗಿದೆ. ೨೪,೭೫೦ ಮಂಜುರಾಗಿದ್ದು, ೪೯,೯೩೯ ವಿಲೇವಾರಿಯಾಗಿದೆ. ೨೫,೧೮೯ ಅರ್ಜಿಗಳು ತಿರಸ್ಕೃತವಾಗಿವೆ. ೨೦,೫೯೧ ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ಈ ಸಂದರ್ಭ ಮಾಹಿತಿ ನೀಡಿದರು.