ಮಂಗಳೂರು: ಅಮಾಯಕ ಕಾರ್ತಿಕ್ರಾಜ್ ರನ್ನು ತನ್ನ ಸಂಬಂಧಿ ಕುಟುಂಬ ವರ್ಗದವರೇ ಕೊಲೆ ಮಾಡಿದ್ದ ಸತ್ಯ ಗೊತ್ತಿದ್ದರೂ ಅಮಾಯಕರನ್ನು ಹಿಂಸಿಸಿ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ ಕೊಣಾಜೆ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ವಜಾಗೊಳಿಸುವಂತೆ ಆಗ್ರಹ ಕೇಳಿ ಬಂದಿದೆ. ಕಾರ್ತಿಕ್ರಾಜ್ ಕೊಲೆ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ತೋರಿ ತನ್ನ ಕುಟುಂಬ ವರ್ಗದವರನ್ನು ರಕ್ಷಿಸಲು ಅಶೋಕ್ ಮುಂದಾಗಿದ್ದರು.
ಈ ಕಾರಣಕ್ಕೆ ಅಮಾಯಕರನ್ನು ಜೈಲಿಗೆ ಹಾಕಿ ಹಿಂಸಿಸಿದ್ದಾರೆ. ಇದರಿಂದ ಅಶೋಕ್ ರನ್ನು ತಕ್ಷಣ ಅಮಾನತು ಮಾಡಬೇಕೆಂದು ಒತ್ತಾಯಿಸಿ ಕೊಣಾಜೆ ನಾಗರಿಕ ಸಮಿತಿ ಸದಸ್ಯರು ಬುಧವಾರದಂದು ಕೊಣಾಜೆ ಠಾಣಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಕೊಣಾಜೆಯ ಸಾಮಾನ್ಯ ರಿಕ್ಷಾ ಚಾಲಕರಿಗೂ ಕಾರ್ತಿಕ್ರಾಜ್ ಕೊಲೆಯಾದ ಒಂದು ವಾರದಲ್ಲೇ ಕೊಲೆಗಾರರು ಅವರ ಕುಟುಂಬ ವರ್ಗದವರೇ ಎಂದು ತಿಳಿದಿದ್ದರೂ ಸಹ ಇನ್ ಸ್ಪೆಕ್ಟರ್ ಅಶೋಕ್ ಮಾತ್ರ ಕೊಲೆಯಾದ ಕಾರ್ತಿಕ್ ಕುಟುಂಬದವರು ತನ್ನ ಸಂಬಂಧಿಗಳಾದ ಕಾರಣ ಸ್ವಜನ ಪಕ್ಷಪಾತ ತೋರಿದ್ದಾರೆ.
ನೈಜ ಆರೋಪಿಗಳನ್ನು ರಕ್ಷಿಸಲು ಹೋಗಿ ಸುಮಾರು ನೂರರಷ್ಟು ಅಮಾಯಕರನ್ನು ಜೈಲಿಗೆ ಹಾಕಿ ಹಿಂಸೆ ನೀಡಿದ್ದಾರೆ. ಬಹುತೇಕ ಮುಸ್ಲಿಮರನ್ನೇ ಟಾರ್ಗೆಟ್ ಮಾಡಿದ್ದು ಖಂಡನಾರ್ಹ ಎಂದು ಕೋಮು ಸೌಹಾರ್ದ ವೇದಿಕೆ ಮುಖಂಡರಾದ ಇಸ್ಮತ್ ಪಜೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.