ಮಂಗಳೂರು: ಮಂಗಳೂರು ಹೊರವಲಯದ ಬೋಳಿಯಾರ್ ಪಡೀಲು ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಕಾರು ಅಪಘಾತದಲ್ಲಿ ಮಂಜೇಶ್ವರ ಕಡಂಬಾರಿನ ಯುವ ಉದ್ಯಮಿ ಮೃತಪಟ್ಟಿದ್ದು, ಇನ್ನೊರ್ವ ಗಂಭೀರ ಗಾಯಗೊಂಡಿದ್ದಾರೆ.ಮಂಜೇಶ್ವರದ ಕಡಂಬಾರು ಇಡಿಯ ನಿವಾಸಿ ಯೂಸುಫ್ (38) ಸಾವನ್ನಪ್ಪಿದವರು.ಅವರ ಜತೆಗಿದ್ದ ಮಚ್ಚಂಪಾಡಿ ನಿವಾಸಿ ಖಲೀಲ್ ಬಜಾಲ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ: ಯೂಸುಫ್ ಅವರ ಸಹೋದರ ಹನೀಫ್ ಅವರ ಪುತ್ರಿಯ ಮದುವೆ ಮೇ 6ರಂದು ನಿಗದಿಯಾಗಿದ್ದು, ಉಪ್ಪಿನಂಗಡಿ ಯಲ್ಲಿರುವ ಸಂಬಂಧಿಗಳಿಗೆ ಆಮಂತ್ರಣ ಪತ್ರ ನೀಡಲೆಂದು ಯೂಸುಫ್ ಸಂಬಂಧಿ ಖಲೀಲ್ ಜತೆ ತೆರಳುತ್ತಿದ್ದಾಗ ಕಾರು ಹೊಂಡಕ್ಕೆ ಉರುಳಿ ಮರಕ್ಕೆ ಢಿಕ್ಕಿ ಹೊಡೆಯಿತು. ಯೂಸುಫ್ ಮತ್ತು ಖಲೀಲ್ ಗಂಭೀರ ಗಾಯಗೊಂಡಿದ್ದರು. ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆಯೇ ಯೂಸುಫ್ ಸಾವನ್ನಪ್ಪಿದರು. ಯೂಸುಫ್ ಮಡಿಕೇರಿಯ ಕುಶಾಲನಗರದಲ್ಲಿ ಹೊಟೇಲ್ ಹಾಗೂ ವಸತಿಗೃಹವನ್ನು ನಡೆಸುತ್ತಿದ್ದರು. ಮೃತರು ತಾಯಿ, ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.