ಮಂಗಳೂರು: ಮಂಗಳೂರು ಹೊರವಲಯದ ಬಜ್ಪೆ ಸಮೀಪದ ಗಂಜಿಮಠದ ಎಸ್ಇಝಡ್ ಬಳಿ ಇರುವ 'ಮೋಹ ಪ್ಯಾಕೇಜಿಂಗ್ ಇಂಡಿಯಾ ಲಿಮಿಟೆಡ್' ಕಾರ್ಖಾನೆಯಲ್ಲಿ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಬಜ್ಪೆಯ ನಿವಾಸಿ ಮುಹಮ್ಮದ್ ಹನೀಫ್ ಎಂಬವರಿಗೆ ಸೇರಿದ 'ಮೋಹ ಪ್ಯಾಕೇಜಿಂಗ್ ಇಂಡಿಯಾ ಲಿಮಿಟೆಡ್'ಗೆ ತಡರಾತ್ರಿ 2.30ರ ಸುಮಾರಿಗೆ ಬೆಂಕಿ ಬಿದ್ದಿದ್ದು, ಸುಮಾರು 10 ಕೋಟಿ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ಕಾಣಿಸಿಕೊಂಡಿರುವುದು ಬಜ್ಪೆ ಪೊಲೀಸರ ಗಮನಕ್ಕೆ ಬಂದಿದ್ದು, ತಡರಾತ್ರಿ 2:40ರ ಸುಮಾರಿಗೆ ಪೊಲೀಸರು ಫ್ಯಾಕ್ಟರಿ ಮಾಲಕರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರ ಸಾಹಸ ಪಟ್ಟರು.ವಸ್ತುಗಳನ್ನು ಇನ್ನೇನು ಒಂದೆರಡು ದಿನಗಳಲ್ಲಿ ವಿದೇಶಕ್ಕೆ ರಫ್ತು ಮಾಡಲು ಸಂಗ್ರಹಿಸಿ ಇಡಲಾಗಿದ್ದ ಇಂಡಸ್ಟ್ರೀಸ್ ಪ್ಯಾಕೇಜಿಂಗ್ ಐಟಂ, ಲೈನರ್ಸ್, ಗಾರ್ ಬೇಜ್ ಮೊದಲಾದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.ಈ ಅವಘಡ ಸಂಭವಿಸಿರುವ ಬಗ್ಗೆ ತಡರಾತ್ರಿ ಸುಮಾರು 2:30ಕ್ಕೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಆದರೂ 10ರಿಂದ 12 ಕೋಟಿ ರು. ವೆಚ್ಚದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ಫ್ಯಾಕ್ಟರಿ ಮಾಲಕ ನೀಡಿದ್ದಾರೆ.