ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದ ಸಂದರ್ಶಕರ ಗ್ಯಾಲರಿ ಬಳಿ ಸೋಮವಾರ ಸಂಜೆ ವಿಚಾರಣಾಧೀನ ಖೈದಿಗಳು ಹೊಡೆದಾಡಿಕೊಂಡಿದ್ದು, ಈ ಘಟನೆಯಲ್ಲಿ ವಿಚಾರಣಾಧೀನ ಖೈದಿ ಪುತ್ತೂರಿನ ಪ್ರತಾಪ್ ರೈಗೆ ಗಾಯವಾಗಿದೆ.ಗಾಯಾಳು ಮೂಡಬಿದಿರೆಯ ಪ್ರಕರಣವೊಂದಕ್ಕೆ ಸಂಬಂಧಿಸಿದ ಆರೋಪಿಯಾಗಿದ್ದು, ಕೋರ್ಟ್ ವಾರಂಟ್ನಲ್ಲಿ ಇತ್ತೀಚೆಗೆ ಆತನನ್ನು ಬಂಧಿಸಲಾಗಿತ್ತು. ಈತನ ಮೇಲೆ ಆರೋಪಿಗಳಾದ ಮಹಮ್ಮದ್ ನಾಸೀರ್ ಅಲಿಯಾಸ್ ನಂಗ್ ನಾಸಿರ್, ಅಲ್ತಾಫ್, ಬಾಂಬೆ ಫೈಜಲ್ ಹಲ್ಲೆ ನಡೆಸಿದ್ದರು.
ಜಿಲ್ಲಾ ಕಾರಗೃಹದಲ್ಲಿ ಸೋಮವಾರ ಸಂಜೆ ವೇಳೆಗೆ ಎ ಮತ್ತು ಬಿ ವಿಭಾಗದ ಖೈದಿಗಳನ್ನು ಏಕಕಾಲಕ್ಕೆ ಸಾರ್ವಜನಿಕರ ಭೇಟಿಗೆ ಬಿಡಲಾಗಿದ್ದು, ಎರಡು ವಿಭಾಗದ ಖೈದಿಗಳು ವಿಸಿಟರ್ ರೂಮ್ ಬಳಿ ಪರಸ್ಪರ ಎದುರಾಗಿದ್ದರು. ಈ ವೇಳೆ ಖೈದಿಗಳು ಮಧ್ಯೆ ಪರಸ್ಪರ ಗುರಾಯಿಸಿಕೊಂಡಿದ್ದು, ಬಳಿಕ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದುಕೊಂಡು ಗಲಾಟೆ ನಡೆಸಿದ್ದಾರೆ.ಸಂದರ್ಭದಲ್ಲಿ ಏಕಾಏಕಿ 3 ಮಂದಿ ಖೈದಿಗಳು ಪುತ್ತೂರಿನ ಪ್ರತಾಪ್ ರೈ ಮೇಲೆ ಇಂಟರಾಲಾಕ್ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಇದರಿಂದ ಪ್ರತಾಪ್ ತಲೆಗೆ ಗಾಯವಾಗಿದೆ. ಕೂಡಲೇ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಬಳಿಕ ಜೈಲಿಗೆ ಕರೆದುಕೊಂಡು ಬರಲಾಗಿದೆ. ಘಟನೆ ಜೈಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಹಲವು ದಿನಗಳಿಂದ ಜೈಲಿನ "ಎ' ವಿಭಾಗದಲ್ಲಿ ಪರಸ್ಪರ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.