ಮಂಗಳೂರು: ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯ ಮೂಲದವರ ಹತ್ಯೆ ಹೆಚ್ಚುತ್ತಿರುವುದು ಖಂಡನಾರ್ಹವಾಗಿದ್ದು, ಭಾರತೀಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ. ಮೇ 4ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆಗೀಡಾದ ಮಂಗಳೂರು ಮೂಲದ ನರೇನಾ ಪ್ರಭು ಮತ್ತು ರಾಯಲ್ ಸಿಕ್ವೇರಾ ಪ್ರಭು ದಂಪತಿ ಮೃತದೇಹವನ್ನು ಮಂಗಳೂರಿಗೆ ತರಲು ಸೂಕ್ತ ವ್ಯವಸ್ಥೆಗೆ ವಿದೇಶಾಂಗ ಸಚಿವಾಲಯ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕಟೀಲ್ ಮನವಿ ಮಾಡಿದ್ದಾರೆ.ಮಂಗಳೂರು ಮೂಲದ ದಂಪತಿಯನ್ನು ಅಮೆರಿಕದ ಸಾನ್ ಜೋಸ್ ಎಂಬಲ್ಲಿ ದುಷ್ಕರ್ಮಿಯೋರ್ವ ಗುಂಡಿಕ್ಕಿ ಕೊಂದ ಘಟನೆ ಅತ್ಯಂತ ಹೇಯ ಕೃತ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಘಟನೆ ವಿವರ: ಮೇ 4, ರಂದು ಮಂಗಳೂರು ಮೂಲದ ನರೇನಾ ಪ್ರಭು ಮತ್ತು ರಾಯಲ್ ಸಿಕ್ವೇರಾ ಪ್ರಭು ದಂಪತಿಯನ್ನು ಅಮೆರಿಕದ ಸಾನ್ ಜೋಸ್ ಎಂಬಲ್ಲಿ ದುಷ್ಕರ್ಮಿಯೋರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದ. ಪುತ್ರಿಯ ಮಾಜಿ ಪ್ರಿಯಕರ ಮಿರ್ಜಾ ಟಾಟ್ಲಿಕ್(24) ಎಂಬುವವನೇ ಈ ಕೃತ್ಯ ಮಾಡಿದ್ದು, ಪೊಲೀಸರ ಗುಂಡಿಗೆ ಟಾಟ್ಲಿಕ್ ಬಲಿಯಾಗಿದ್ದಾನೆಂಬ ಮಾಹಿತಿ ಲಭ್ಯವಾಗಿದೆ. ಟಾಟ್ಲಿಕ್ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.