ಮಂಗಳೂರು: ರಾಜ್ಯದಲ್ಲಿ ದಕ್ಷ ಹಾಗೂ ಜನಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರಕಾರವನ್ನು ದೂಷಿಸಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ. ಬಿಜೆಪಿ ಸರಕಾರದ ಭ್ರಷ್ಟಾಚಾರ, ಹಗರಣಗಳನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ವಿ.ಆರ್. ಸುದರ್ಶನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ರಾಜ್ಯ ಸರಕಾರವನ್ನು ಭ್ರಷ್ಟ ಸರಕಾರ ಎಂದು ನಿರ್ಣಯ ಮಾಡಿದ್ದಾರೆ. ಆ ಹಕ್ಕು ಬಿಜೆಪಿ ನಾಯಕರಿಗಿಲ್ಲ. ಮುಖ್ಯವಾಗಿ ಬಿ.ಎಸ್. ಯಡಿಯೂರಪ್ಪನವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದರ ಕಾನೂನು ಪ್ರಕ್ರಿಯೆಗಳು ಈಗಲೂ ನಡೆಯುತ್ತಿವೆ ಎಂದರು. ಹಿಂದಿನ ಸರಕಾರದ ಮೂವರು ಮುಖ್ಯಮಂತ್ರಿಗಳನ್ನು ನೆನಪಿಸಿಕೊಂಡಾಗ ಜನತೆ ಈಗಲೂ ಬೆಚ್ಚಿ ಬೀಳುತ್ತಾರೆ. ಉತ್ತಮ ವಿಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿಯೂ ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿದರು.