ಮಂಗಳೂರು: ನನ್ನ ಮಗ ಡಾ ಯತೀಂದ್ರ ವಿರುದ್ಧ ಬೇನಾಮಿ ಆಸ್ತಿಯ ಬಗ್ಗೆ ದೂರು ನೀಡಲಾಗಿರುವುದು ರಾಜಕೀಯ ಪ್ರೇರಿತ ಪಿತೂರಿ. ಇದೊಂದು ಆಧಾರ ರಹಿತ ಆರೋಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ಹೇಳಿದ್ದಾರೆ. ಮಂಗಳವಾರ ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ಉಡುಪಿಯ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಅವರ ಪುತ್ರಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದರು.
ರಾಜ್ಯದ ವಿಧಾನ ಪರಿಷತ್ನ ಮೂರು ಸ್ಥಾನಗಳ ಆಯ್ಕೆಗೆ ಸಂಬಂಧಿಸಿದಂತೆ ಹೈಕಮಾಂಡಿಗೆ ಹೆಸರು ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯಕ್ಕೆ ಎಐಪಿಸಿಸಿ ವೀಕ್ಷಕ ಕೆಸಿ ವೇಣುಗೋಪಾಲ್ ಭೇಟಿ ನೀಡಿರುವುದು ಮುಂದಿನ ಚುನಾವಣೆಯ ವಿಷಯದ ಬಗ್ಗೆ ಚರ್ಚಿಸಲು ಹೊರತು ಬೇರೆ ಯಾವ ವಿಷಯವನ್ನೂ ಚರ್ಚಿಸಲು ಅಲ್ಲ. ರಾಜ್ಯದ ಕಾಂಗ್ರೆಸ್ ಮುಖಂಡರ ಬಗ್ಗೆ ಯಾರೂ ದೂರು ನೀಡಿಲ್ಲ.ಕೆ.ಪಿ.ಸಿ.ಸಿ ಅಧ್ಯಕ್ಷರ ಆಯ್ಕೆ ಇನ್ನು ಅಂತಿಮ ಗೊಂಡಿಲ್ಲ.ಈ ಬಗ್ಗೆ ಹೈ ಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಸಿಎಂ ತಿಳಿಸಿದರು.