ಗುರುಪುರ : ``ನಮ್ಮ ನಾಗರಿಕತೆಗೂ ಕೃಷಿಗೂ ಹತ್ತಿರದ ಸಂಬಂಧವಿದೆ. ನದಿ ದಡದಿಂದಲೇ ನಾಗರಿಕತೆ ಹುಟ್ಟಿಕೊಂಡಿದೆ. ಇಲ್ಲಿಂದ ಹೊಸ ನಾಗರಿಕತೆ ಹುಟ್ಟಲಿ. ಅದು, ಇವತ್ತು ನಮ್ಮ ಜಿಲ್ಲೆಯ ಕೆಲವು ಪೀಡೆಗಳಿಗೆ ಉತ್ತರವಾಗಬಲ್ಲ ಸಮುದಾಯದ ಒಗ್ಗಟಿನ ನಾಗರಿಕತೆ, ಮಾತೃಪ್ರಧಾನ ಚಿಂತನೆಯ ನಾಗರಿಕತೆ, ನಮ್ಮ ಹೆಣ್ಣು-ಗಂಡು ಮಕ್ಕಳನ್ನು ಒಗ್ಗೂಡಿಸುವ ಸಮಾನತೆಯ ಸಂಸ್ಕøತಿ ಬೆಳೆಸುವ ನಾಗರಿಕತೆಯಾಗಲಿ'' ಎಂದು ಕಾನೂನುತಜ್ಞೆ, ಪುಣೆ ಕಾನೂನು ಶಿಕ್ಷಣ ಸಂಸ್ಥೆ ಎಸ್ಎಲ್ಎಸ್ ಡೀನ್-ನಿರ್ದೇಶಕಿ ಡಾ ಶಶಿಕಲಾ ಗುರುಪುರ ಅಭಿಪ್ರಾಯಪಟ್ಟರು.
ಇಲ್ಲಿನ ಕಾರಮೊಗರಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಾಶಾಭಿಷೇಕ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ `ಆಶಯ ಭಾಷಣ' ಮಾಡುತ್ತಿದ್ದ ಅವರು, ``ಒಂದೆಡೆ ಸುಪ್ತವಾಗಿರುವ ಶಕ್ತಿಯನ್ನು ಚಲನಶೀಲಗೊಳಿಸುವಾಗ ಪ್ರಕೃತಿಯೊಂದಿಗೆ ಅಥವಾ ಈ ಶಕ್ತಿ ಜೊತೆ ನಮ್ಮ ಅವಿನಾಭಾವ ಸಂಬಂಧ ಗಟ್ಟಿಯಾಗುತ್ತದೆ. ಅಂತಹ ಸನ್ನಿವೇಶವೊಂದರಲ್ಲಿ, ಅಲ್ಲಿ ಗೋಪಾಲಕೃಷ್ಣ ಇಲ್ಲದಿದ್ದರೆ ಅಗ್ನಿದುರ್ಗೆಯ ಸಾಕ್ಷಾತ್ಕಾರದ ಸಾಧ್ಯವಿಲ್ಲ ಅಥವಾ ಗೋಪಾಕೃಷ್ಣನನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಗ್ನಿದುರ್ಗೆಯ ಸಾಕ್ಷಾತ್ಕಾರದ ಪ್ರಯತ್ನ ಅಪೂರ್ಣವಾಗುತ್ತದೆ'' ಎಂದು ಮಾರ್ಮಿಕವಾಗಿ ಬಣ್ಣಿಸಿದರು.
``ನಮ್ಮಲ್ಲಿ ಈಗಲೂ ಪ್ರಚಾರಪ್ರಿಯ ನಾಯಕತ್ವ ಮುಂದುವರಿದಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಕಾಣಬಲ್ಲ ಆಧುನಿಕತೆ ಮತ್ತು ಸಮುದಾಯದ ಪ್ರಗತಿಗೆ ಸಾಕ್ಷ್ಯಿಯಾಗಬಲ್ಲ ಹಿಂದಿನಿಂದ ಪ್ರೇರೇಪಿಸುವ ನಾಯಕತ್ವ ಮನೋಭಾವದ ಅಗತ್ಯ ಇಲ್ಲೂ ಇದೆ. ಆದರೆ, ಇದನ್ನು ಎಷ್ಟು ಜನ ಒಪ್ಪಿಕೊಳ್ಳುತ್ತಾರೆಂದು ಹೇಳಲು ಸಾಧ್ಯವಿಲ್ಲ'' ಎಂದು ನಾಯಕತ್ವದ ಬಗ್ಗೆ ಡಾ ಶಶಿಕಲಾ ವಿವರಿಸಿದರು. ತಾಯಿತನ ಅಥವಾ ಮಾತೃತ್ವದ ಬಗ್ಗೆಯೂ ಅತ್ಯಂತ ಸುಂದರವಾಗಿ ಮಾತು ಬೆಳೆಸಿದರು.
ಈ ಧಾರ್ಮಿಕ ಸಭೆಯಲ್ಲಿ ಮಾರೂರು ಖಂಡಿಗೆ ರಾಮದಾಸ ಆಸ್ರಣ್ಣ ಆಶೀರ್ವಚನ ನೀಡಿದರು. ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಧರ್ಮಕ್ಷೇತ್ರ ಮತ್ತು ಧಾರ್ಮಿಕ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ಮತ್ತೊಬ್ಬ ಅತಿಥಿ ರಾಜೇಶ್ ನಾಯಕ್ ``ನಮ್ಮ ನಂಬಿಕೆ'' ಉಳಿದುಕೊಂಡಿರುವ ವಿಷಯದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ದಿನೇಶ್ ಶೆಟ್ಟಿ, ತಾ ಪಂ ಸದಸ್ಯ ಸಚಿನ್ ಅಡಪ, ಜಿತೇಂದ್ರ ಕೊಟ್ಟಾರಿ, ಶಾಸಕರಾದ ಮೊೈದಿನ್ ಬಾವಾ ಮತ್ತು ಅಭಯಚಂದ್ರ ಜೈನ್ ಹಾಗೂ ಈ ಕ್ಷೇತ್ರದ ಕಾರ್ಯಕಾರಿ ಸಮಿತಿ ಅಧ್ಯಕ್ಷ, ಕಾರ್ಯಕ್ರಮದ ರೂವಾರಿ ಡಾ ರವಿರಾಜ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ ಶೆಟ್ಟಿ ಸಲ್ಲಾಜೆ ಪ್ರಸ್ತಾವಿಕ ಮಾತನಾಡಿ ಸಭಿಕರನ್ನು ಸ್ವಾಗತಿಸಿದರು.