ಮಂಗಳೂರು: ಚಿಕ್ಕಮಗಳೂರು -ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗದ ಚಾರ್ಮಾಡಿ ಘಾಟ್ ನಲ್ಲಿ ಮಂಗಳವಾರ ಮಧ್ಯಾಹ್ನ ಕೇರಳ ನೋಂದಣಿ ಇರುವ ಖಾಸಗಿ ಬಸ್ ಕಂದಕಕ್ಕೆ ಉರುಳಿದೆ. ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮೂಡಿಗೆರೆ ಕಡೆಯಿಂದ ಚಾರ್ಮಾಡಿ ಮೂಲಕ ಹೋಗುತ್ತಿದ್ದ ಮಿನಿಬಸ್, ಚಾರ್ಮಾಡಿ ಘಾಟಿಯ 5ನೇ ತಿರುವಿನಲ್ಲಿ ಈ ಅಪಘಾತಕ್ಕೀಡಾಯಿತು. ಕೇರಳ ಮೂಲದ KL 16-2617 ನೋಂದಣಿ ಇರುವ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ.ಬಸ್ಸಿನಲ್ಲಿ ಸುಮಾರು 40ಕ್ಕೂ ಅಧಿಕ ಪ್ರಯಾಣಿಕರಿದ್ದರು.
ಈ ದುರ್ಘಟನೆಯಿಂದಾಗಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಅನೇಕರಿಗೆ ಗಾಯಗಳಾಗಿವೆ.ಘಟನಾ ಸ್ಥಳಕ್ಕೆ ಬಣಕಲ್ ಮತ್ತು ಧರ್ಮಸ್ಥಳದ ಪೊಲೀಸರು ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಗಾಯಗೊಂಡವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.