ಮಂಗಳೂರು: ಮಂಗಳೂರು ಹೊರವಲಯದ ಮರವೂರು ಡ್ಯಾಮ್ನ ಕೆಳಭಾಗದಲ್ಲಿ ಗುರುಪುರ ನದಿಯ ನೀರು ಕಲುಷಿತಗೊಂಡಿರುವ ಕುರಿತು ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಲಾಗುವುದು ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಗುರುವಾರ ದ.ಕ.ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಮತ್ತು ಶಾಸಕ ಅಭಯಚಂದ್ರ ಜೈನ್ ಅವರ ಜತೆ ಮರವೂರಿಗೆ ಭೇಟಿ ನೀಡಿ ಕಲುಷಿತಗೊಂಡಿರುವ ಗುರುಪುರ ನದಿಯ ನೀರನ್ನು ಪರಿಶೀಲಿಸಿದರು.5 ದಿನಗಳೊಳಗೆ ಅಧಿಕಾರಿಗಳಿಂದ ವರದಿ ತರಿಸಲಾಗುವುದು. ತಜ್ಞ ವಿಜ್ಞಾನಿಯ ಮೂಲಕ ತನಿಖೆ ನಡೆಸಲಾಗುವುದು; ಇದಕ್ಕೆ ಎನ್ಐಟಿಕೆ ಸಹಾಯವನ್ನು ಪಡೆಯಲಾಗುವುದು ಎಂದು ಸಚಿವ ರೈ ವಿವರಿಸಿದರು.