ಮಂಗಳೂರು:"ಅನ್ನಭಾಗ್ಯ ಯೋಜನೆಯಲ್ಲಿ 2 ಸಾವಿರ ಕೋಟಿ ಹಗರಣದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ," ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯುಟಿ ಖಾದರ್ ಮಂಗಳೂರಿನಲ್ಲಿ ಹೇಳಿದ್ದಾರೆ. ಆಹಾರ ಇಲಾಖೆ ಕಮಿಷನರ್ ಅನುರಾಗ್ ತಿವಾರಿ ನಿಗೂಢ ಸಾವಿನ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಅನುರಾಗ್ ತಿವಾರಿ ಜನವರಿ 4ರಿಂದ ನಮ್ಮ ಇಲಾಖೆಯಲ್ಲಿ ಇದ್ದರು. ತನ್ನ ಕರ್ತವ್ಯದ ಅವಧಿಯ 132 ದಿನಗಳಲ್ಲಿ 38 ದಿನ ಮಾತ್ರ ಕೆಲಸ ಮಾಡಿದ್ದಾರೆ. ಬೇರೆ ದಿವಸ ಪಂಜಾಬ್, ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಒಂದಷ್ಟು ದಿನ ಐಎಎಸ್ ತರಬೇತಿಗೂ ಹೋಗಿದ್ದರು.ಸರ್ಕಾರದ ಬಳಿ ಅನುಮತಿ ಪಡೆದೇ ಅವರು ರಜೆಯ ಮೇಲೆ ತೆರಳಿದ್ದರು ಎಂದಿದ್ದಾರೆ."ಆದರೆ ನನಗೆ ಅನ್ನಭಾಗ್ಯ ಯೋಜನೆಯಲ್ಲಿ 2 ಸಾವಿರ ಕೋಟಿ ಹಗರಣ ನಡೆದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅಂತಹ ಯಾವುದೇ ವಿಚಾರಗಳು ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಅಲ್ಲದೇ ಹಗರಣ ಸಂಬಂಧ ತಿವಾರಿಗೆ ಒತ್ತಡ ಇದ್ದ ಬಗ್ಗೆ ಪರಿಶೀಲಿಸಿದ್ದೇನೆ. ನನ್ನ ಇಲಾಖೆಯ ಎಲ್ಲಾ ಅಧಿಕಾರಿಗಳ ಬಳಿ ಕೇಳಿದಾಗಲೂ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ,"ತನಿಖೆ ನಡೆಯುತ್ತಿರುವ ಕಾರಣದಿಂದ ಆ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿಲ್ಲ. ಸರ್ಕಾರದ 7 ಅಧಿಕಾರಿಗಳು ಉತ್ತರಪ್ರದೇಶದಲ್ಲಿದ್ದು, ಘಟನೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.