ಮಂಗಳೂರು: ಮಂಗಳೂರು ಹೊರವಲಯದ ಪೆರ್ಮುದೆ ಪಾರಾಳೆಗುತ್ತು ಭುಜಂಗ ಶೆಟ್ಟಿಯವರ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಸುಮಾರು 60 ಸಾವಿರ ರೂ. ಮೌಲ್ಯದ ಕಂಬಳ ಕೋಣಗಳನ್ನು ಕಳವು ಮಾಡಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 18ರಂದು ರಾತ್ರಿ ಗಾಳಿ ಮಳೆ ಬರುತ್ತಿದ್ದು ಹಟ್ಟಿಯಲ್ಲಿ ಕಟ್ಟಿಹಾಕಿದ್ದ ಎರಡು ಕೋಣಗಳನ್ನು ಅದರ ಹಗ್ಗವನ್ನು ಕಡಿದು ಹಾಕಿ ಕಳವು ಮಾಡಲಾಗಿದೆ. ಈ ಬಗ್ಗೆ ಮಾಲಕ ಭುಜಂಗ ಶೆಟ್ಟಿಯವರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪಾರಾಳೆಗುತ್ತು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಕಂಬಳಕ್ಕೆ ಈ ಕೋಣಗಳನ್ನು ಸಾಕುತ್ತಿದ್ದು ಇತರೆಡೆಯಲ್ಲಿ ನಡೆಯುವ ಕಂಬಳಕ್ಕೂ ಈ ಕೋಣವನ್ನು ಕೊಂಡುಹೋಗುತ್ತಿದ್ದರು.
ಕಳ್ಳರು ಕೋಣಗಳ ಹಗ್ಗವನ್ನು ಕಂಬಳ ಗದ್ದೆಯಲ್ಲಿ ಬಿಸಾಕಿದ್ದಾರೆ.ಕೋಣಗಳ ಕಳವಿನ ಬಗ್ಗೆ ಮನೆಮಂದಿಗೆ ಬೆಳಗ್ಗೆ ಗೊತ್ತಾದಿದ್ದು ಕಳ್ಳರು ಹಟ್ಟಿಯ ಹಿಂಬದಿಯ ಬಾಗಿಲಿನಿಂದ ಕೋಣಗಳನ್ನು ಕೊಂಡೊಯ್ದಿದಿದ್ದಾರೆ.ಬಜಪೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.