ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೆನರಾ ಸರ್ಫಿಂಗ್ ಮತ್ತು ಜಲಕ್ರೀಡೆ ಉತ್ತೇಜನಾ ಸಂಸ್ಥೆ, ಮಂತ್ರ ಸರ್ಫ್ ಕ್ಲಬ್ ಸಹಭಾಗಿತ್ವದ ಅಂತಾರಾಷ್ಟ್ರೀಯ ಸರ್ಫಿಂಗ್ ಉತ್ಸವ 'ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಗೆ ಮೇ.26ರಂದು ಚಾಲನೆ ದೊರೆತಿದೆ. ರಾಜ್ಯ ಅರಣ್ಯ ಹಾಗೂ ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ್ ರೈ ಇಂಡಿಯನ್ ಓಪನ್ ಸರ್ಫಿಂಗ್ -2017 ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, "ಸರ್ಫಿಂಗ್ ಗೆ ವಿದೇಶದಲ್ಲಿ ಸಿಗುತ್ತಿರುವಷ್ಟು ಮನ್ನಣೆ ನಮ್ಮಲ್ಲಿ ಸಿಗುತ್ತಿಲ್ಲ. ಈ ಕಾರಣದಿಂದ ಸಸಿಹಿತ್ಲು ಬೀಚ್ನಲ್ಲಿ ಕಳೆದ ವರ್ಷದಿಂದ ಸರ್ಫಿಂಗ್ ಗೆ ವಿಶೇಷ ಮುತುವರ್ಜಿ ವಹಿಸಲಾಗುತ್ತಿದೆ. ಇಲ್ಲಿ ಸರ್ಫಿಂಗ್ ಅನ್ನು ಬೆಳೆಸಲು ಸರಕಾರ ಹೆಚ್ಚಿನ ಸಹಕಾರ ನೀಡುತ್ತಿದೆ" ಎಂದರು.ಸಸಿಹಿತ್ಲು ಬಳಿಯ ಕಡಲ ತೀರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಅಂತಾರಾಷ್ಟ್ರೀಯ ಸರ್ಫಿಂಗ್ ಉತ್ಸವಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ರಾಯಭಾರಿಯಾಗಿದ್ದು ಮೇ 26 ರಿಂದ 28ರ ವರೆಗೆ ಇಂಡಿಯನ್ ಓಪನ್ ಸರ್ಫಿಂಗ್ -2017 ಕ್ರೀಡಾಕೂಟ ನಡೆಯಲಿದೆ.ಸರ್ಫಿಂಗ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಜೆ.ಆರ್.ಲೋಬೊ, ಮನಪಾ ಮೇಯರ್ ಕವಿತಾ ಸನಿಲ್, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ನವೀನ್ರಾಜ್ ಸಿಂಗ್, ಕೆನರಾ ವಾಟರ್ ಸ್ಪೋರ್ಟ್ಸ್ ಆಂಡ್ ಪ್ರಮೋಶನ್ಸ್ ಕೌನ್ಸಿಲ್ ಅಧ್ಯಕ್ಷ ಮನೋಹರ್ ಶೆಟ್ಟಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.