ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ ಚಂದ್ರಶೇಖರ್ ಜಾಗಕ್ಕೆ ನೇಮಕವಾಗಿದ್ದ ಎನ್ ಸತೀಶ್ ಕುಮಾರ್ ವರ್ಗಾವಣೆಯನ್ನು ರದ್ದು ಪಡಿಸಲಾಗಿದೆ. ಇದಕ್ಕೆ ಸಚಿವ ಯುಟಿ ಖಾದರ್ ಕಾರಣ ಎನ್ನಲಾಗಿದೆ. ಆಹಾರ ಸಚಿವ ಯು. ಟಿ. ಖಾದರ್ ಹಾಗೂ ಕಾಂಗ್ರೆಸ್ ಶಾಸಕರು ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಸತೀಶ್ ಕುಮಾರ್ ಮಂಗಳೂರಿಗೆ ಬರುವುದು ಬೇಡವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದನ್ನು ಸಚಿವ ಖಾದರ್ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದರು ಎಂದೂ ಹೇಳಲಾಗಿದೆ.
ಒಟ್ಟಿನಲ್ಲಿ ಸತೀಶ್ ಕುಮಾರ್ ಅಧಿಕಾರ ಸ್ವೀಕರಿಸುವುದು ಮಾತ್ರ ರದ್ದಾಗಿದೆ.ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸತೀಶ್ ಕುಮಾರ್ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಜನರಿಂದ ದೂರುಗಳಿದ್ದವು. ದೇಶ, ವಿದೇಶಗಳಲ್ಲಿ ಮಂಗಳೂರಿಗೆ ಕೆಟ್ಟ ಹೆಸರು ತಂದ ಚರ್ಚ್ ದಾಳಿ ಪ್ರಕರಣ ಹಾಗೂ ಅದರ ಬೆನ್ನಿಗೇ ಚರ್ಚ್ ನಲ್ಲಿ ಪ್ರಾರ್ಥನಾ ನಿರತರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣಗಳು ಸತೀಶ್ ಕುಮಾರ್ ಅವಧಿಯಲ್ಲೇ ನಡೆದಿದ್ದವು. ಆದ್ದರಿಂದ ಅವರ ಕಾರ್ಯ ವೈಖರಿಯ ಕುರಿತು ತೀವ್ರ ಆ ಸಂದರ್ಭದಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿತ್ತು.