ಮಂಗಳೂರು: ಮಂಗಳೂರಿನ ಸಿಸಿಬಿ ಘಟಕದ ಪೊಲೀಸರು ಶನಿವಾರ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ 14 ಕೆ.ಜಿ. ಗಾಂಜಾ ಸಹಿತ 3,35,400 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ನ ಅಬ್ದುಲ್ ಅಜೀಜ್ (35) ಮತ್ತು ಮೊಹಮ್ಮದ್ ಮುಸ್ತಾಫ ಯಾನೆ ಗಿಡಿ (44) ಬಂಧಿತ ಆರೋಪಿಗಳು.
ಸಿಸಿಬಿ ಘಟಕದ ಎಸಿಪಿ ವೆಲೆಂಟೈನ್ ಡಿ'ಸೋಜಾ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಅವರು ಶನಿವಾರ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಿಲ್ವರ್ ಬಣ್ಣದ ಕೆ.ಎ.01,ಎಂಸಿ 52 ನಂಬ್ರದ ಮಾರುತಿ 800 ಕಾರಿನಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಮುಡಿಪು ಬಳಿಯ ಕಾಯರ್ಗೊಳಿ ಕ್ರಾಸ್ ಬಳಿ ಅವರು ವಾಹನ ತಪಾಸಣೆ ಕಾರ್ಯ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 14 ಕೆ.ಜಿ ಗಾಂಜಾ ಮತ್ತು ಒಂದು ಮಾರುತಿ 800 ಕಾರು ಹಾಗೂ ಎರಡು ಮೊಬೈಲ್ ಪೋನ್ಗಳನ್ನು ವಶಪಡಿಸಿ ಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3,35,400 ರೂ. ಆರೋಪಿಗಳು ತಾವು ಆಂಧ್ರ ಪ್ರದೇಶದ ಪಳಮನೀರ್ ನಲ್ಲಿರುವ ಶೇಖ್ ಸಲೀಂ ಭಾಷಾ ಎಂಬಾತನಿಂದ 14 ಕೆ.ಜಿ ಗಾಂಜಾವನ್ನು ಪಡೆದುಕೊಂಡು ಬಂದಿದ್ದು, ಅದನ್ನು ಇಲ್ಲಿನ ಜನರಿಗೆ ಹಾಗೂ ಕೇರಳದ ಮಂಜೇಶ್ವರ, ಉಪ್ಪಳಕ್ಕೆ ಮಾರಾಟ ಮಾಡಲು ಹೊರಟಿದ್ದಾಗಿ ತಿಳಿಸಿದ್ದಾರೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.