ಮಂಗಳೂರು:ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದ ಚೂರಿ ಇರಿತ ಘಟನೆಯನ್ನು ತಿರುಚಿ ಹಾಕಿ ಪೊಲೀಸರು ನಮ್ಮ ಹಿಂದೂ ಯುವಕರ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ. ಮಾತ್ರವಲ್ಲ ವೈಯಕ್ತಿಕ ಘಟನೆಗೆ ಕೋಮು ಬಣ್ಣ ಹಚ್ಚಿದ್ದಾರೆ ಎಂದು ಆರೆಸ್ಸೆಸ್ ದಕ್ಷಿಣ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಶನಿವಾರ ಕಲ್ಲಡ್ಕದಲ್ಲಿ ಗುಂಪೊಂದು ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಿಸುತ್ತಿದ್ದರೂ, ಪೊಲೀಸರು ಮಾತ್ರ ಮೌನವಾಗಿ ಅದನ್ನು ನೋಡುತ್ತಾ ನಿಂತ್ತಿದ್ದರು ಎಂದು ಆರೋಪಿಸಿದ್ದಾರೆ.ಘಟನೆಯ ಸ್ಥಳಕ್ಕೆ ನಾನು ಭೇಟಿ ನೀಡಲು ಹೋದಾಗ ಅಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಕಾರಿನಿಂದ ಕೆಳಗೆ ಇಳಿಯಲು ಬಿಟ್ಟಿಲ್ಲ. ಅಂಗಡಿ ಮಾಲಕರಿಗೆ, ರಿಕ್ಷಾ ಚಾಲಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಅದನ್ನು ಮಾಡದೆ ಕರ್ತವ್ಯ ಚ್ಯುತಿ ಎಸಗಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕೆಲವರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದರು. ಪೊಲೀಸರು ಅವರನ್ನು ತಡೆಯವ ಪ್ರಯತ್ನವನ್ನೂ ಮಾಡಿಲ್ಲ. ಬದಲಾಗಿ ಸೆ. 144 ಹಾಕಿದ್ದಾರೆ ಎಂದರು. ಇನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ದುರ್ಬಲರಾಗಿದ್ದು, ಅವರಿಗೆ ಕೇವಲ ಸೆಕ್ಷನ್ ಹೇರಲು ಮಾತ್ರ ಗೊತ್ತು. ಆದ್ದರಿಂದ ಅವರನ್ನು ಬದಲಾಯಿಸಿ, ಧೈರ್ಯವಂತ ಎಸ್ಪಿಯನ್ನು ಜಿಲ್ಲೆಗೆ ನಿಯುಕ್ತಿಗೊಳಿಸಬೇಕು ಎಂದು ಪ್ರಭಾಕರ ಭಟ್ ಆಗ್ರಹಿಸಿದರು.