ಮಂಗಳೂರು , ಜೂ.09: ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಯತ್ತ ಕಾಲೇಜುಗಳನ್ನು ನಿಯಂತ್ರಿಸುವ ಅನುಶಾಸನದ ಪ್ರಕಾರ ತಮ್ಮ ಕಾಲೇಜಿನ ಆಡಳಿತ ಮಂಡಳಿ,ಶೈಕ್ಷಣಿಕ ಮಂಡಳಿ, ಹಾಗೂ ವಿವಿಧ ಅಧ್ಯಯನ ಮಂಡಳಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರತಿನಿಧಿಗಳನ್ನು ಶೈಕ್ಷಣಿಕ ವರ್ಷ 2017-19ರ ವರೆಗೆ (ಎರಡು ವರ್ಷಗಳ ಅವಧಿಗೆ) ನಾಮ ನಿರ್ದೇಶನ ಮಾಡಲಾಗಿದ್ದು, ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ "ಕೊಂಕಣಿ" ಅಧ್ಯಯನ ಮಂಡಳಿಗೆ ಹಿರಿಯ ಶಿಕ್ಷಕ/ ಪತ್ರಕರ್ತ ಬಿ. ಪುಂಡಲೀಕ ಮರಾಠೆ ಶಿರ್ವ ಇವರನ್ನು ನಾಮ ನಿರ್ದೇಶನ ಮಾಡಲಾಗಿದೆ.
ಇವರು ಕರ್ನಾಟಕ ಸರಕಾರದ ಶಾಲಾ ಕೊಂಕಣಿ ಪಠ್ಯಪುಸ್ತಕ ರಚನಾ ಸಮಿತಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿದ್ದು, ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ಸರಕಾರ ಸ್ಥಾಪಿಸಿದ ಕೊಂಕಣಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಬೆಳ್ಮಣ್ ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯಲ್ಲಿ ಹಿರಿಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು,ಅಂತಾರಾಷ್ಠ್ರೀಯ ರೋಟರಿ ಜಿಲ್ಲೆ 3182 ಇದರ "ರೋಟರಿ ಇಂಡಿಯಾ ಲಿಟರಸಿ ಮಿಷನ್ "ಇದರ ಉಪ ಕಾರ್ಯಾಧ್ಯಕ್ಷ, ಕಾಪು ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಲ್ಲದೆ ವಿವಿಧ ಸಾಮಾಜಿಕ ಸೇವಾಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ.