ಮಂಗಳೂರು: ಪ್ಲಾಸ್ಟಿಕ್ ಅಕ್ಕಿ ಮತ್ತು ಪ್ಲಾಸ್ಟಿಕ್ ಮೊಟ್ಟೆ ಬಗ್ಗೆ ಹರಡುತ್ತಿರುವ ಸುದ್ದಿಗಳು ಆಧಾರ ರಹಿತವಾಗಿವೆ. ಈ ಕುರಿತಂತೆ ಜನಸಾಮಾನ್ಯರು ಯಾವುದೇ ಭಯಪಡಬೇಕಾಗಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಅನ್ನಭಾಗ್ಯ ಯೋಜನೆಯ ಯಶಸ್ಸನ್ನು ಸಹಿಸದೆ ಕೆಲವರು ಇಂತಹ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಪ್ಲಾಸ್ಟಿಕ್ ಅಕ್ಕಿ ತಯಾರಿಸಲು 80ರಿಂದ 100 ರೂ.ಗಳಷ್ಟು ಮತ್ತು ಪ್ಲಾಸ್ಟಿಕ್ ಮೊಟ್ಟೆಗೆ 40 ರೂ. ಮೇಲ್ಪಟ್ಟು ಖರ್ಚಾಗುತ್ತದೆ. ಹಾಗಾಗಿ ಅಂತಹ ದುಸ್ಸಾಹಸಕ್ಕೆ ಯಾರೂ ಕೈ ಹಾಕಲಾರರು. ಜನರು ಗೊಂದಲಗೊಳ್ಳಬಾರದು ಎಂಬುದಾಗಿ ಅವರು ವಿನಂತಿಸಿದರು.ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 2.77 ಲಕ್ಷ ಮೆಟ್ರಿಕ್ ಟನ್ ಅಕ್ಕಿ ರಾಜ್ಯಕ್ಕೆ ಬೇಕಾಗುತ್ತದೆ. ಇದನ್ನು ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾದ ಮುಖಾಂತರವೇ ತರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.