ಮಂಗಳೂರು: "ಕಂಬಳ' ವನ್ನು ಯಥಾ ಪ್ರಕಾರ ಮುಂದುವರಿಸುವ ರಾಜ್ಯ ಸರಕಾರದ "ಕಂಬಳ ತಿದ್ದುಪಡಿ ಮಸೂದೆ'ಗೆ ಎದುರಾಗಿದ್ದ ಎಲ್ಲ ಕಾನೂನು ಅಡೆತಡೆ ಮತ್ತು ಗೊಂದಲ ನಿವಾರಣೆಯಾಗಿದ್ದು, ಈ ಮಸೂದೆಯ ಕಡತ ಗೃಹ ಸಚಿವಾಲಯ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕಂಬಳ ಮಸೂದೆ ರಾಷ್ಟ್ರಪತಿ ಅವರ ಅಂಕಿತದೊಂದಿಗೆ ಕಾನೂನು ಆಗಿ ಜಾರಿಯಾಗಲಿದೆ.
ದಿಲ್ಲಿಯಲ್ಲಿ ಬುಧವಾರ ಸಾಂಖಿಕ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಅವರ ನೇತೃತ್ವದಲ್ಲಿ ಕಂಬಳ ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿ ಸಂಚಾಲಕ ಸೀತಾರಾಮ ಶೆಟ್ಟಿ ಹಾಗೂ ಕಂಬಳ ಸಮಿತಿಯ ಅಶೋಕ್ ಕುಮಾರ್ ರೈ ಅವರು ಕಂಬಳ ಮಸೂದೆಯನ್ನು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲು ನಡೆಸಿದ ಪ್ರಯತ್ನ ಯಶಸ್ವಿಯಾಗಿದೆ. ಮಹತ್ವದ ಬೆಳವಣಿಗೆ ಅಂದರೆ, ರಾಜ್ಯ ಸರಕಾರವು ಸಚಿವ ಸಂಪುಟದ ಒಪ್ಪಿಗೆ ಪಡೆದು ಕೆಲವು ಪರಿಷ್ಕರಣೆಯೊಂದಿಗೆ 2ನೇ ಸಲ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದ "ಕಂಬಳ ತಿದ್ದುಪಡಿ ಮಸೂದೆ'ಗೆ ಬುಧವಾರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸಹಿ ಹಾಕಿದ್ದು, ಆ ಮೂಲಕ ಕಾನೂನು ಇಲಾಖೆಯಿಂದ ಹಲವು ತಿಂಗಳಿನಿಂದ ಎದುರಾಗಿದ್ದ ಕಾನೂನು ತೊಡಕು ಬಗೆಹರಿದಿದೆ.