ಮಂಗಳೂರು: ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ಇಬ್ರಾಹಿಂ ಖಲೀಲ್ ಎಂಬ ಯುವಕನಿಗೆ ಚೂರಿ ಇರಿದ ಪ್ರಕರಣದ ಪ್ರಮುಖ ಆರೋಪಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ಘಟಕದ ಅಧ್ಯಕ್ಷ ರತ್ನಾಕರ್ ಶೆಟ್ಟಿ ಪೊಲೀಸ್ ಕಾವಲಿನ ನಡೆವೆಯೂ ಪುತ್ತೂರು ಖಾಸಗಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಬೈಕೊಂದು ಅಪಘಾತಕ್ಕೀಡಾಗಿ ಗಾಯಗೊಂಡ ಇಬ್ಬರು ಹಿಂದೂ ಯುವಕರನ್ನು ಕಲ್ಲಡ್ಕ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದ ಕಲ್ಲಡ್ಕದ ನಿವಾಸಿ ಇಬ್ರಾಹಿಂ ಖಲೀಲ್ ಮತ್ತು ಮಗನ ಚಿಕಿತ್ಸೆಗಾಗಿ ಅದೇ ಆಸ್ಪತ್ರೆಗೆ ಬಂದಿದ್ದ ರತ್ನಾಕರ್ ಶೆಟ್ಟಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಆಸ್ಪತೆಯಿಂದ ಹೊರಟು ಹೋಗಿದ್ದ ಇಬ್ರಾಹಿಂ ಖಲೀಲ್ ಕಲ್ಲಡ್ಕ ಜುಮಾ ಮಸೀದಿ ಎದುರು ನಿಂತಿದ್ದ ವೇಳೆ ಕಾರಿನಲ್ಲಿ ಬಂದ ರತ್ನಾಕರ್ ಶೆಟ್ಟಿ ಆತನ ಸಹಚರರು ಖಲೀಲ್ ಗೆ ಚೂರಿಯಿಂದ ಇರಿದಿದ್ದು, ಈ ಸಂದರ್ಭ ರತ್ನಾಕರ್ ಶೆಟ್ಟಿ ಸಣ್ಣ ಪ್ರಮಾಣದ ಗಾಯವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರತ್ನಾಕರ್ ಶೆಟ್ಟಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆತನ ವಿರುದ್ಧ ಇಬ್ರಾಹಿಂ ಖಲೀಲ್ ಬಂಟ್ವಾಳ ನಗರ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸಿದ್ದರು.
ಪೊಲೀಸ್ ಇಲಾಖೆಯ ವಿರುದ್ಧ ಜನಾಕ್ರೋಶ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರತ್ನಾಕರ್ ತಪ್ಪಿಸಿಕೊಳ್ಳಬಾರದೆಂದು ಎರಡು ಪಾಳಿಯಲ್ಲಿ ತಲಾ ಇಬ್ಬರಂತೆ ನಾಲ್ವರು ಪೊಲೀಸರನ್ನು ನಿಯೋಜಿಸಲಾಗಿತ್ತು. ಇದೀಗ ಪೊಲೀಸ್ ಕಾವಲಿನ ನಡುವೆಯೂ ರತ್ನಾಕರ್ ಶೆಟ್ಟಿ ಆಸ್ಪತ್ರೆಯಿಂದ ಪರಾರಿಯಾಗಿರುವುದು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ವಿರುದ್ಧ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.