ಕುಂದಾಪುರ: ಯಕ್ಷಗಾನದ ಮೂಲಕ ಜನರಲ್ಲಿ ಯೋಗ,ಸ್ವಚ್ಛ ಭಾರತದ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಸಾಂಸ್ಕøತಿಕ ಕಲೆಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಂಘಟಿಸಿದಾಗ ಸಾರ್ವಜನಿಕರು ಅದನ್ನು ಆಸಕ್ತಿಯಿಂದ ಗಮನಿಸಿ ತಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಜೆಸಿಐ ಇಂಡಿಯಾದ ವಲಯ ಅಧ್ಯಕ್ಷ ಜೆಎಫ್ಪಿ ಸಂತೋಷ್ ಜಿ.ಹೇಳಿದರು.
ಅವರು ಮಂಗಳವಾರ ಭಾರತ ಸರಕಾರದ ಗೀತೆ ಮತ್ತು ನಾಟಕ ವಿಭಾಗ, ನೆಹರು ಯುವ ಕೇಂದ್ರ ಉಡುಪಿ, ಬೆಂಗಳೂರಿನ ಯಕ್ಷ ದೇಗುಲ, ಕುಂದಾಪುರ ಜೆಸಿಐ ಚರಿಷ್ಮಾ, ಬೀಜಾಡಿ ಗೋಪಾಡಿ ಮಿತ್ರ ಸಂಗಮ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ಕುಂದಾಪುರದ ತಾಲೂಕಿನಲ್ಲಿ ಯೋಗ ಮತ್ತು ಸ್ವಚ್ಚ ಭಾರತ ವಿಷಯದಲ್ಲಿ ಯಕ್ಷಗಾನದ ಮೂಲಕ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಮಟ್ಟದ ಈ ಕಾರ್ಯಕ್ರಮವನ್ನು ಚೆಂಡೆ ಬಾರಿಸುವುದರ ಮೂಲಕ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ಉದ್ಘಾಟಿಸಿ ಮಾತನಾಡಿ,ಸಣ್ಣ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿಯದ್ದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಪರಿಸರ ಸ್ವಚ್ಛತೆಯ ಕಡೆಗೆ ಆಸಕ್ತಿ ತೋರಿಸಬೇಕು ಎಂದರು.
ವೇದಿಕೆಯಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಗಾಣಿಗ,ಗೀತೆ ಮತ್ತು ನಾಟಕ ವಿಭಾಗದ ಬೆಂಗಳೂರಿನ ಅಧಿಕಾರಿ ಮನೋಹರ,ಜೆಸಿಐ ಕುಂದಾಪುರ ಚರಿಷ್ಮಾದ ಅಧ್ಯಕ್ಷೆ ಗೀತಾಂಜಲಿ ಆರ್.ನಾಯಕ್,ಉದ್ಯಮಿ ಕೆ.ಆರ್ ನಾಯಕ್, ಬೆಂಗಳೂರು ಯಕ್ಷ ದೇಗುಲದ ಭಾಗವತ ಲಂಬೋಧರ ಹೆಗ್ಡೆ, ಜೆಸಿಐ ಕಾರ್ಯಕ್ರಮ ಸಂಯೋಜಕ ಜೆಸಿ ಅನಿಲ್ ಮೊದಲಾದವರು ಉಪಸ್ಥಿತರಿದ್ದರು.
ಮಿತ್ರ ಸಂಗಮದ ಅಧ್ಯಕ್ಷ ಅನೂಪ್ ಕುಮಾರ್ ಬಿ.ಆರ್ ಸ್ವಾಗತಿಸಿದರು. ನೆಹರು ಯುವ ಕೇಂದ್ರದ ನರಸಿಂಹ ಗಾಣೀಗ ಪ್ರಾಸ್ತಾವನೆಗೈದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಶಂಕರನಾರಾಯಣ ಬಾಯರಿ ವಂದಿಸಿದರು.