ಮುಂಬಯಿ, ಜೂ.21: ದಕ್ಷಿಣ ಕನ್ನಡ ಜಿಲ್ಲೆಯ ಕಡಲ ತೀರಗಳಲ್ಲಿ ಮತ್ತು ನದಿ ತೀರಗಳಲ್ಲಿ ಪ್ಲಾಸ್ಟಿಕ್, ಕಾಗದ, ಕಸಕಡ್ಡಿಗಳು, ಪೇಪರ್ ಪ್ಲೇಟ್ಸ್ ಇತ್ಯಾದಿ ನಿರುಪಯುಕ್ತ ವಸ್ತುಗಳನ್ನು ಮನ ಬಂದಂತೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಹಾಕುವುದರಿಂದ ನದಿ, ಸಮುದ್ರದ ನೀರು, ನದಿ ತೀರ ಮತ್ತು ಕಡಲತೀರಗಳು ಕಲುಷಿತಗೊಂಡು ಹಾಗೂ ಕಡಲತೀರಗಳ ಸೌಂದರ್ಯವನ್ನು ಹಾಳುಗೆಡವುತ್ತಿರುತ್ತವೆ. ಮತ್ತು ತ್ಯಾಜ್ಯ ವಸ್ತುಗಳ ಶೇಖರಣೆಗಾಗಿ ನದಿತೀರಗಳಲ್ಲಿ ಕಸದ ಡಬ್ಬಗಳನ್ನು ಅಳವಡಿಸಿರುವುದಿಲ್ಲ. ಆದ್ದರಿಂದ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಹೆಜಮಾಡಿ ಮೊಗವೀರ ಸಭಾ ಇದರ ಮುಂಬಯಿ ಉಪನಗರದ ಭಯಂದರ್ ಪೂರ್ವದಲ್ಲಿನ ಆರ್ಸಿಪಿ ಪಾರ್ಕ್ನ ಸಾಗರ್ ದರ್ಶನ್ ನಿವಾಸಿ ಕರುಣಾಕರ್ ಹೆಜಮಾಡಿ ಮನವಿ ಸಲ್ಲಿಸಿದ್ದರು.
ಮನವಿಗೆ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕರ ಕಚೇರಿಯ ಉನ್ನತಾಧಿಕಾರಿಗಳು ಉತ್ತರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು, ತಣ್ಣಿರುಬಾವಿ ಮತ್ತು ಸೋಮೇಶ್ವರ ಕಡಲತೀರಗಳನ್ನು ಖಾಸಗಿ ನಿರ್ವಹಣಾದಾರರಿಗೆ ಟೆಂಡರ್ ಮೂಲಕ ನಿರ್ವಹಿಸಲು ನೀಡಲಾಗಿರುತ್ತದೆ. ಸದ್ರಿ ಕಡಲ ತೀರಗಳಲ್ಲಿ ಎಲ್ಲಾ ಸ್ವಚ್ಛತಾ ಕಾರ್ಯಕ್ರಮಗಳನ್ನು ನಿರಂತರವಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ. ಬಾಕಿ ಉಳಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಲತೀರಗಳಾದ ಸುರತ್ಕಲ್, ಸುಲ್ತಾನ್ಭತ್ತೇರಿ (ನದಿತೀರ), ಉಳ್ಳಾಲ, ಸೋಮೇಶ್ವರ, ತಲಪಾಡಿ ಬೀಚ್ಗಳನ್ನು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಈ ಬಗ್ಗೆ ಮೂಲಭೂತ ಪ್ರವಾಸಿ ಸೌಲಭ್ಯಗಳನ್ನು ಅಭಿವೃಧ್ಧಿಗೊಳಿಸಿದ ನಂತರ ನಿರ್ವಹಣೆಗಾಗಿ ಟೆಂಡರು ಮೂಲಕ ಖಾಸಗಿಯವರಿಗೆ ನೀಡಲಾಗುವುದು ಎಂದು ಕರುಣಾಕರ್ ಹೆಜಮಾಡಿ ಮನವಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮಂಗಳೂರು ಲಾಲ್ಭಾಗ್ ಅಲ್ಲಿನ ಮಹಾನಗರ ಪಾಲಿಕಾ ಕಟ್ಟಡದಲ್ಲಿನ ವಿಭಾಗೀಯ ಸಹಾಯಕ ನಿರ್ದೇಶಕರು ಲಿಖಿತವಾಗಿ ಉತ್ತರಿಸಿದ್ದಾರೆ.
ಸದ್ರಿ ಕಡಲತೀರ, ನದಿತೀರಗಳಲ್ಲಿ ಯಾವುದೇ ತ್ಯಾಜ್ಯ ವಸ್ತುಗಳನ್ನು ಮನಬಂದಂತೆ ಹಾಕಲು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಆಸ್ಪದ ನೀಡಲಾಗುವುದಿಲ್ಲ. ಆದುದರಿಂದ ತಾವು ಸಲ್ಲಿಸಿರುವ ಮನವಿ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಡಲತೀರ, ನದಿ ತೀರಗಳನ್ನು ತ್ಯಾಜ್ಯ ರಹಿತ ಸ್ವಚ್ಛ ಕಡಲತೀರವನ್ನಾಗಿ ನಿರ್ವಹಿಸಲು ತಮ್ಮ ಎಲ್ಲಾ ಸಲಹೆಗಳನ್ನು ಗಮನದಲ್ಲಿರಿಸಿ ಕ್ರಮ ಕೈಗೊಳ್ಳಲಾಗುವುದು ಎಂದೂ ಕರುಣಾಕರ್ ಹೆಜಮಾಡಿ ಪತ್ರಕ್ಕೆ (ಪ್ರತಿಕ್ರಿಯಿಸಿದ್ದಾರೆ) ಜವಾಬು ಕೊಟ್ಟಿದ್ದಾರೆ.
ಸದಾ ತೆರೆಮರೆಯಲ್ಲಿದ್ದು ಸಮಾಜೋಭಿವೃದ್ಧಿಯ ಆಗುಹೋಗುಗಳ ಬಗ್ಗೆ ಸದಾ ಕಾಳಜಿಯನ್ನಿರಿಸಿ ಆಯಾ ಇಲಾಖೆಗಳನ್ನು ಎಚ್ಚರಿಸಿ ಅನೇಕ ಮೂಲಭೂತ ಸೌಕರ್ಯಗಳ ಬಗ್ಗೆ ಅಥವಾ ಇನ್ನಿತರ ಸೂಕ್ಷ್ಮ ವಿಚಾರಗಳ ಬಗ್ಗೆ ಚಿಂತಿಸಿ ಸಂಬಂಧಿತ ಸರಕಾರಿ ಯಾ ಖಾಸಾಗಿ ಇಲಾಖೆಗಳ ಅಧಿಕಾರಿಗಳನ್ನು ಸಮಯೋಚಿತವಾಗಿ ಎಚ್ಚರಿಸುತ್ತಾ ಸೇವಾ ಪ್ರವೃತ್ತರಾದ ಕರುಣಾಕರ್ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.