ಮಂಗಳೂರು: ಅಶ್ರಫ್ ಕೊಲೆ ಪ್ರಕರಣದ ದುಷ್ಕರ್ಮಿಗಳ ಶೋಧಕ್ಕೆ 4 ತಂಡಗಳನ್ನು ರಚಿಸಲಾಗಿದೆ. ಕೊಲೆ ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಶೀಘ್ರವಾಗಿ ಬಂಧಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.
ಮುಹಮ್ಮದ್ ಅಶ್ರಫ್ ಕಲಾಯಿ ಅವರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು . ಬಂಟ್ವಾಳ ತಾಲೂಕಿನಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಗಾ ವಹಿಸುವುದಾಗಿ ಅವರು ಈ ಸಂದರ್ಭ ಹೇಳಿದರು.ಕಲ್ಲಡ್ಕ, ಮಣಿ, ಬಿ ಸಿ ರೋಡ್, ಕೈಕಂಬ, ಪರಂಗಿಪೇಟೆ ಮತ್ತು ಬಂಟ್ವಾಳ ಪರಿಸರದಲ್ಲಿ ಪರಿಸ್ಥಿತಿ ಹತೋಟಿಗೆ ತರುವ ನಿಟ್ಟಿನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಜೂ. 27ರ ವರೆಗೆ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿರುವುದಾಗಿ ಅವರು ಈ ಸಂದರ್ಭ ಮಾಹಿತಿ ನೀಡಿದರು. ಇನ್ನು ದೇವಸ್ಥಾನ-ಮಂದಿರಗಳ ಮೇಲೆ ದಾಳಿ, ಮತೀಯ ಉಗ್ರವಾದ, ಲವ್ ಜಿಹಾದ್, ಅಕ್ರಮ ಗೋಸಾಗಾಣಿಕೆ ವಿರೋಧಿಸಿ ಹಿಂದೂ ಹಿತರಕ್ಷಣಾ ಸಮಿತಿಯ ವತಿಯಿಂದ ಜೂ.24ರಂದು ಬೆಳಗ್ಗೆ 10ಕ್ಕೆ ಬಿ.ಸಿ.ರೋಡಿನಲ್ಲಿ ಇರುವ ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.