ಮುಂಬಯಿ, ಜೂ.30: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ತಮ್ಮ 21ನೇ ವರ್ಷದ ಚಾತುರ್ಮಾಸ್ಯ ವೃತ ಕೈಗೊಳ್ಳಲಿದ್ದಾರೆ.
ಇದೇ ಜುಲಾಯಿ 16ರ ಕರ್ಕಾಟಕ ಸಂಕ್ರಮಣದ ಸಪ್ತಮಿಯ ಭಾನುವಾರದಿಂದ ಸೆಪ್ಟೆಂಬರ್ 07ರ ಭಾದ್ರಪದ ಕೃಷ್ಣ ಪಕ್ಷ (ಮಹಾಲಯ ಆರಂಭ) ದ ಗುರುವಾರ ತನಕ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಕಳೆದ ವರ್ಷದಂತೆ ಈ ಬಾರಿಯೂ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲೇ ಚಾತುರ್ಮಾಸ್ಯ ವೃತ ಆಚರಿಸಲಿದ್ದು ಚಾತುರ್ಮಾಸ್ಯವಾಧಿಯಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಂಗೀತ, ಯಕ್ಷಗಾನ ಹಾಗೂ ಕಲಾರಾದನಾ ಜ್ಞಾನೋದಯ ಬಗ್ಗೆ ವಿಶೇಷ ಉಪನ್ಯಾಸ, ಪಾಠಪ್ರವಚನ, ಉಪನ್ಯಾಸ, ಚರ್ಚಾಗೋಷ್ಠಿ ನಡೆಸಲು ಉದ್ದೇಶಿಸಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.
ಇದೇ ಜು.02ರ ಆದಿತ್ಯವಾರ ಪೂರ್ವಾಹ್ನ ಮುಂಬಯಿ ಮಹಾನಗರಕ್ಕಾಗಮಿಸಿ ಖಾಸಾಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ನಂತರ ಸಂಜೆ 3.00 ಗಂಟೆ ತನಕ ಚೆಂಬೂರು ಪಶ್ಚಿಮದಲ್ಲಿನ ಛೆಡ್ಡಾನಗರದ ಶ್ರೀ ಸುಬ್ರಹ್ಮಣ್ಯ ಮಠದ ಶಾಖೆಗೆ ಭೇಟಿ ನೀಡಿ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಉಪಸ್ಥಿತ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಲಿರುವರು ಎಂದು ಮಠದ ವ್ಯವಸ್ಥಾಪಕ ವಿಷ್ಣು ಕಾರಂತ್ ತಿಳಿಸಿದ್ದಾರೆ.