ಮಂಗಳೂರು, ಜು.04: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಮಂಜುನಾಥ್ ಎಜ್ಯುಕೇಶನ್ ಟ್ರಸ್ಟ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಳೆದ ಶನಿವಾರ ಮಂಗಳೂರು ಉರ್ವಸ್ಟೋರ್ನ ಯುವವಾಹಿನಿ ಸಭಾಂಗಣದಲ್ಲಿ ಕನ್ನಡ ಚೆಂತನ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ನಡೆಯಿತು.
ಬೆಂಗಳೂರು ರಾಯಲ್ ಪ್ಯಾಲೇಸ್ ಲಯನ್ಸ್ ಕ್ಲಬ್ ಅಧ್ಯಕ್ಷ, ಗ್ಲೋಬಲ್ ಮ್ಯಾನ್ ಪುರಸ್ಕೃತ ಡಾ| ಶೈಲೇಶ್ ಕುಮಾರ್ ಸಮಾರಂಭ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕನ್ನಡ ನಮ್ಮ ಮಾತೃ ಭಾಷೆ. ಮೊದಲು ಇದನ್ನು ಬೆಳೆಸಬೇಕು. ನಾವು ಸರಿಯಾಗಿ ಇದ್ದರೆ ಮಾತ್ರ ಮಕ್ಕಳಿಗೆ ಮಾರ್ಗದರ್ಶನ ಮಾಡಲು ನಮಗೆ ಸಾಧ್ಯವಾಗುತ್ತದೆ. ಮಕ್ಕಳು ದುಶ್ಚಟಗಳ ದಾಸರಾಗುವುದನ್ನು ತಪ್ಪಿಸಬೇಕು.ವಿದ್ಯೆ,ಉದ್ಯೋಗ, ಸಂಪರ್ಕ, ಆರೋಗ್ಯ ದಿಂದ ಬಲಿಷ್ಠ ಯುವ ಸಮಾಜವನ್ನು ನಿರ್ಮಿಸಬೇಕು ಎಂದರು.
ಮಂಗಳೂರು ಉತ್ತರ ವಲಯ ಪೆÇಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಕನ್ನಡ ಚಿಂತನ ಉಪನ್ಯಾಸ ವಿತ್ತರು. ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರು ತುಂಬ ಜನ ಇದ್ದಾರೆ. ನಮಗೆ ಇದು ಹೆಮ್ಮೆ. ಕನ್ನಡ ಬಹಳ ಪ್ರಾಚೀನ ಭಾಷೆ.ಅದನ್ನು ವ್ಯವಹಾರದಲ್ಲಿ ಬಳಸಿ ಬೆಳೆಸಬೇಕು. ಕನ್ನಡ ಆಡುಭಾಷೆಯಲ್ಲಿ ಸುಧಾರಣೆ ತರಬೇಕು. ತಮಿಳು ಕನ್ನಡ, ತೆಲುಗು ಕನ್ನಡ, ಮಲಯಾಳೀ ಕನ್ನಡ ಬಿಟ್ಟು ಶುದ್ಧಕನ್ನಡ ಮಾತನಾಡಬೇಕು ಎಂದರು.ಕಷ್ಟ ಬಂತು ಎಂದು ಎದೆ ಗುಂದಬಾರದು. ಇವತ್ತು ಕಷ್ಟ ಪಟ್ಟ ವ್ಯಕ್ತಿ ನಾಳೆ ಈ ದೇಶದ ಆಸ್ತಿ ಯಾಗ್ತಾನೆ ಎಂದರು.
ಆಯೋಜಕ ಸಹ ಸಂಘಟನೆ ಹೃದಯವಾಹಿನಿ ಕರ್ಣಾಟಕವು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಡಾ| ಶೈಲೇಶ್ ಅವರಿಗೆ ವಿಶ್ವಮಾನ್ಯ ಪ್ರಶಸ್ತಿ ಮತ್ತು ಹಾಸ್ಯನಟ, ಮಜ್ಹಾ ಟಾಕೀಸ್ ಖ್ಯಾತಿಯ ನವೀನ್ ಡಿ.ಪಡೀಲ್ ಅವರಿಗೆ ಕರ್ನಾಟಕ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಡೀಲ್ ಮಾತನಾಡಿ ಕನ್ನಡ ನಾಡಿನಲ್ಲಿ ಹುಟ್ಟಿದ ನಾವು ಭಾಗ್ಯಶಾಲಿಗಳು.ಎಲ್ಲ ಭಾಷೆ,ಧರ್ಮ ಗಳಿಗೆ ಆಶ್ರಯ ಕೊಡುವ ವಿಶಾಲ ಮನೋಭಾವ ನಮ್ಮದು.ದೇವರ ನಾಡು,ಬುದ್ಧಿ ವಂತರ ಜಿಲ್ಲೆಯೆಂದು ಕರೆಯಲ್ಪಡುವ ನಮ್ಮಲ್ಲಿ ಸಾಮರಸ್ಯ ಕ್ಕೆ ಯಾವತ್ತೂ ಧಕ್ಕೆ ಬರಬಾರದು ಎಂದರು.
ಮಂಗಳೂರು ಒಮೆಗಾ ಆಸ್ಪತ್ರೆ ಯ ಕಾರ್ಯ ನಿರ್ವಹಣಾ ಆಡಳಿತಾಧಿಕಾರಿ ಎಸ್.ಎಲ್.ಭಾರಧ್ವಾಜ್ ಮೆಚ್ಚುಗೆ ಸೂಚಿಸಿ ಇಂತಹ ಕನ್ನಡ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಅತಿಥಿüಯಾಗಿ ಉಪಸ್ಥಿತ ಅಶ್ವಿನ್ ಕುಮಾರ್ ಆರ್.ಶೇಠ್ ಕನ್ನಡ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನ ಸೇರುವುದಿಲ್ಲ ಎಂದು ಆಪಾದನೆ ಮಾಡುವವರಿದ್ದಾರೆ. ಆದರೆ ಇಲ್ಲಿ ಸೇರಿದ ಜನ ತಮ್ಮ ಕನ್ನಡ ಪ್ರೀತಿಯನ್ನು ತೋರಿಸಿದ್ದಾರೆ. ಇಂತಹ ಕನ್ನಡ ಪ್ರೀತಿ ಅಭಿಮಾನ ಸದಾ ಇರಲಿ ಎಂದು ಹಾರೈಸಿದರು.
ಹೃದಯ ವಾಹಿನಿ ಕರ್ನಾಟಕ ದ ಅಧ್ಯಕ್ಷ ಇಂ| ಕೆ.ಪಿಮಂಜುನಾಥ ಸಾಗರ್ ಸ್ವಾಗತಿಸಿ, ಪ್ರಸ್ತಾವನೆಗೈದು ಕನ್ನಡಿಗರು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಅವರೆಂದಿಗೆ ಸಂಪರ್ಕ ಕಲ್ಪಿಸಿ ಅವರಲ್ಲಿ ಕನ್ನಡತನವನ್ನು ನವಿರಾಗಿಸುವುದು ನಮ್ಮ ಕಾರ್ಯಸೂಚಿಯಲ್ಲಿ ಪ್ರಮುಖವಾದುದು ಎಂದರು.
ಸಾಂಸ್ಕೃತಿಕ ಕಾರ್ಯ ಕ್ರಮದ ಅಂಗವಾಗಿ ಟಿವಿ9 ಕಾಮಿಡಿ ಎಕ್ಸ್ಪ್ರೆಸ್ ಖ್ಯಾತಿಯ ಮಹಾದೇವ ಸತ್ತಿಗೇರಿ ಹಾಸ್ಯ ಕಾರ್ಯಕ್ರಮ ಮತ್ತು ರವಿ ತೊಕ್ಕೊಟ್ಟು, ಶಿವರಾಜ್ ಪಾಂಡೇಶ್ವರ, ಮಹಮದ್ ಇಕ್ಬಾಲ್ ಬಳಗ ಕನ್ನಡ ಗೀತೆ ಚಿತ್ರಗೀತೆಗಳ ಸ್ವರಸಂಗಮ ಕಾರ್ಯಕ್ರಮ ನಡೆಸಿದರು. ಮಕ್ಕಳಿಗಾಗಿ ಏರ್ಪಡಿಸಿದ ಲಿಖಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ಕು| ದೀಪಾ, ಸರ್ವಾಣಿ, ರುದ್ರಪ್ಪ ಅಲಿಗಾರ್ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಪ್ರಣವ್ ಕೆ., ಕೀರ್ತನಾ, ಲಿಖಿತ್ ಅವರಿಗೆ ಬಹುಮಾನ ವಿತರಿಸಲಾಯಿತು. ಅಶೋಕ್ ಕುಮಾರ್, ದೀಪಕ್ ಎಂ.ಎಸ್, ಶಿವಕುಮಾರ್ ನಿರ್ಣಾಯಕರಾಗಿ ಸಹಕರಿಸಿದರು. ಲೋಕೇಶ್ ಪ್ರಾರ್ಥನೆಗೈದರು. ರವಿ ನಿರೂಪಿಸಿದರು. ಶಿವಕುಮಾರ್ ವಂದಿಸಿದರು.