ಮಂಗಳೂರು: ದ.ಕ.ಜಿಲ್ಲೆಯ ಪುತ್ತೂರಿನ ಹೊರ ವಲಯದ ಮಂಜಲ್ಪಡ್ಪುವಿನಲ್ಲಿ ಉದ್ಯಮಿಯೋರ್ವರ ಕೈಯಿಂದ ಮೂರು ಲಕ್ಷ ನಗದು ತುಂಬಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮುರ ನಿವಾಸಿ ಮನೀಶ್ (19) ಮತ್ತು ಕೆಮ್ಮಾಯಿ ಬೀರ್ನಹಿತ್ತಿಲು ನಿವಾಸಿ ವಿಖ್ಯಾತ್ ದೇವಾಡಿಗ (21) ಬಂಧಿತರು. ಆರೋಪಿಗಳಿಂದ 73 ಸಾವಿರ ರೂ. ನಗದು, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದ ವಿವರ:
ಜೂ.22 ರಂದು ಪುತ್ತೂರಿನ ಮಂಜಲ್ಪಡ್ಪು ಮಂಗಳ ಸ್ಟೋರ್ನ ಪಾಲುದಾರ ಸುದರ್ಶನ್ ನಾಯಕ್ ಅವರು ರಾತ್ರಿ 8.10ರ ಸುಮಾರಿಗೆ ಅಂಗಡಿ ವ್ಯವಹಾರ ಮುಗಿಸಿಕೊಂಡು ವ್ಯವಹಾರದ ಹಣವನ್ನು ಬ್ಯಾಗ್ನಲ್ಲಿ ತುಂಬಿಸಿಕೊಂಡು ಸಂಸ್ಥೆಯ ಇನ್ನೊಬ್ಬರು ಪಾಲುದಾರ ಅಕ್ಷಯ್ ಎಸ್.ಕೆ. ಅವರ ಮಂಜಲ್ಪಡ್ಪುವಿನಲ್ಲಿರುವ ಮನೆಗೆ ಬಂದಿದ್ದರು. ಈ ಸಂದರ್ಭ ಆರೋಪಿಗಳನ್ನು ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದರು.ಸುದರ್ಶನ್ ನಾಯಕ್ ಅವರು ಅಕ್ಷಯ್ ಎಸ್.ಕೆ. ಅವರ ಮನೆಯ ಅಂಗಳಕ್ಕೆ ತಲುಪಿದಾಗ ಅಲ್ಲಿಗೆ ಬಂದ ಆರೋಪಿಗಳನ್ನು ವಿಳಾಸ ಕೇಳುವ ನೆಪದಲ್ಲಿ ನಾಯಕ್ ಅವರ ಗಮನ ಬೇರೆಡೆ ಸೆಳೆದು, ಕೈಯ್ಯಲ್ಲಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.